ತುಮಕೂರು: ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್ ಸವಾರರು ಮತ್ತು ಪೊಲೀಸರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಜಿಲ್ಲೆಯ ವಿಶ್ವವಿದ್ಯಾಲಯದ ಆವರಣದ ಬಳಿ ನಡೆದಿದೆ.
ವಿಶ್ವವಿದ್ಯಾಲಯದ ಬಳಿ ರಿಯಾಜ್ ಪಾಷಾ ಹಾಗೂ ಮಹಮ್ಮದ್ ಯೂಸೂಫ್ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಿಕೊಂಡು ಬಂದಿದ್ದಾರೆ. ಈ ವೇಳೆ ಪೊಲೀಸರು ಬೈಕ್ ತಡೆದು ಲೈಸೆನ್ಸ್ ಸೇರಿದಂತೆ ಇತರ ದಾಖಲೆಗಳನ್ನು ಕೇಳಿದ್ದಾರೆ. ಆದರೆ ಯುವಕರು ದಾಖಲೆಯನ್ನು ನೀಡಲಿಲ್ಲ. ಇದರಿಂದ ಕೋಪಗೊಂಡ ಪೊಲೀಸರು ಅವಾಚ್ಯವಾಗಿ ಶಬ್ದದಿಂದ ಬೈದಿದ್ದಾರೆ.
ಬೈದಿದ್ದಕ್ಕೆ ಇಬ್ಬರು ಯುವಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಇಬ್ಬರ ನಡುವೆ ಹೊಡೆದಾಟ ಆಗಿದೆ. ಈ ಘಟನೆಯಲ್ಲಿ ಸಂಚಾರಿ ಪೂರ್ವ ಠಾಣಾ ಎಎಸ್ಐ ಬಸವರಾಜು ತುಟಿಗೆ ಗಾಯವಾಗಿದೆ. ಇಬ್ಬರು ಯುವಕರಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಶರ್ಟ್ ಹರಿದಿದೆ.
ಕರ್ತವ್ಯ ನಿರತ ಪೊಲೀಸರ ಮೇಲೆ ಕೈ ಮಾಡಿದ್ದಕ್ಕೆ ಕಾನೂನು ಪ್ರಕಾರ ಆರೋಪಿಗಳಿಬ್ಬರನ್ನು ಹೊಸಬಡಾವಣೆ ಠಾಣಾ ಪೊಲೀಸರು ಬಂಧಿಸಿದ್ದಾರೆ.