ಧಾರವಾಡ: ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿರುವ ದ್ವಂದ್ವ ಹೇಳಿಕೆಗೆ ಧಾರವಾಡ (Dharwad) ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಲಾಡ್, ಮುನೇನಕೊಪ್ಪ ಹಾಗೂ ಚಿಕ್ಕನಗೌಡರು ಪಕ್ಷಕ್ಕೆ ಬರುತ್ತಾರೆ ಎಂಬ ಮಾಹಿತಿ ಇತ್ತು. ಕೆಲವರು ಸ್ವಯಂ ಪ್ರೇರಣೆಯಿಂದ ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಇನ್ನೂ ಕೆಲವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ. ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಬಯಸುವ ಆಸಕ್ತರನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೂ ರಿವರ್ಸ್ ಇಲ್ಲ. ಪ್ರಜಾಪ್ರಭುತ್ವದ ದೊಡ್ಡ ಪಕ್ಷ ನಮ್ಮದು. ನಮ್ಮ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು ಎಂದರು.
ನಮ್ಮ ಪಕ್ಷ ಎರಡೂ ಕಡೆ ಬಾಗಿಲು ಇರುವ ಬಸ್ ಇದ್ದಂತೆ. ಬೇಕಾದವರು ಬರಬಹುದು. ಬಿಜೆಪಿಯ ಶಾಸಕರು ಸಿಎಂ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕರು ಅಭಿವೃದ್ಧಿ ವಿಚಾರಗಳಿಗೆ ಸಂಬಂಧಿಸಿದಂತೆ ಭೇಟಿಯಾಗಿರುತ್ತಾರೆ. ರಾಜಕೀಯ ಅಜೆಂಡಾ ಸಹ ಇರಬಹುದು. ಯಾರ್ಯಾರು ಸಿಎಂ ಅವರನ್ನು ಭೇಟಿ ಮಾಡಿದ್ದಾರೋ ಯಾಕೆ ಭೇಟಿ ಆಗಿದ್ದಾರೆ ಅಂತಾ ಅವರನ್ನೇ ಕೇಳಬೇಕು ಎಂದರು.
ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ಸೋಮಶೇಖರ್ ಪ್ರಚಾರ ಮಾಡಿದ ವಿಷಯಕ್ಕೆ ಮಾತನಾಡಿದ ಅವರು, ಇದು ಸರ್ಕಾರಿ ಕಾರ್ಯಕ್ರಮ. ಹೀಗಾಗಿ ಬಿಜೆಪಿಯವರೂ ಕೈ ಜೋಡಿಸಬಹುದು. ಇದರಿಂದ ಸಾರ್ವಜನಿಕರಿಗೆ ಅನುಕೂಲ ಆಗುತ್ತದೆ ಎಂದರು. ಇದನ್ನೂ ಓದಿ: ಮೋದಿ ಹೆಸರು ಹೇಳಿಕೊಂಡು ಗೆಲ್ಲೋದಲ್ಲ – ಸ್ವಪಕ್ಷದ ವಿರುದ್ಧ ಮತ್ತೆ ಗುಡುಗಿದ ರೇಣುಕಾಚಾರ್ಯ
ಧಾರವಾಡ ಜಿಲ್ಲೆಯಲ್ಲಿ 4 ಲಕ್ಷ 4 ಸಾವಿರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿದ್ದಾರೆ. ಅದರಲ್ಲಿ 3 ಲಕ್ಷ 40 ಸಾವಿರ ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. 89% ರಷ್ಟು ನೋಂದಣಿ ಕಾರ್ಯ ಆಗಿದೆ. ಉಳಿದ ಮಹಿಳೆಯರ ನೋಂದಣಿ ಕೂಡ ಆಗಲಿದೆ ಎಂದರು. ಇದನ್ನೂ ಓದಿ: ಜಾತಿ ಕಟ್ಟು ಪಾಡುಗಳನ್ನ ಮೀರಲು ಮಾನವೀಯತೆ, ವಿಚಾರವಂತಿಕೆಯ ದಾರಿ – ಮರ್ಯಾದಾ ಹತ್ಯೆಗೆ ಸಿಎಂ ಆತಂಕ
Web Stories