ಹೈದರಾಬಾದ್: ಆತ್ಮಹತ್ಯೆಗೆ ಶರಣಾಗುವ ಎರಡು ದಿನದ ಹಿಂದೆ ಸರ್ಕಾರೇತರ ಸಂಸ್ಥೆಗೆ(ಎನ್ಜಿಒ) ಅನಾಥ ಕ್ಯಾಬ್ ಚಾಲಕನೊಬ್ಬ ದೇಣಿಗೆ ನೀಡಿದ್ದನು. ಚಾಲಕನ ಸಾವಿನ ಸುದ್ದಿ ತಿಳಿದು ದುಃಖಪಟ್ಟ ಎನ್ಜಿಒ ಸದಸ್ಯರು ಅದೇ ದೇಣಿಗೆ ಹಣದಿಂದ ಆತನ ಅಂತ್ಯಕ್ರಿಯೆ ಮಾಡಿದ್ದಾರೆ.
ಹೈದರಾಬಾದಿನಲ್ಲಿ ಈ ಘಟನೆ ನಡೆದಿದೆ. ಹೈದರಾಬಾದಿನ ವಿಜಯ್ ಆತ್ಮಹತ್ಯೆಗೆ ಶರಣಾದ ಕ್ಯಾಬ್ ಚಾಲಕ. ವಿಜಯ್ ಓರ್ವ ಅನಾಥನಾಗಿದ್ದು, ಹೈದರಾಬಾದಿನಲ್ಲಿ ಕ್ಯಾಬ್ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ಆದರೆ ಆತನಿಗೆ ತನ್ನಂಥೆ ಅನಾಥರಾಗಿರುವವರಿಗೆ ಸಹಾಯ ಮಾಡಬೇಕೆಂಬ ಆಸೆ ಇತ್ತು. ಆದ್ದರಿಂದ ವಿಜಯ್ ‘ಸರ್ವೇ ನೀಡಿ’ ಎಂಬ ಎನ್ಜಿಒಗೆ ತನ್ನ ದುಡಿಮೆಯಿಂದ 6 ಸಾವಿರ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದನು.
ಕ್ಯಾಬ್ ಓಡಿಸಿಕೊಂದು ಅದರಿಂದ ಬರುವ ಹಣದಲ್ಲಿ ಜೀವನ ನಡೆಸುವುದೇ ಕಷ್ಟ. ಆದರೆ ಬೇರೆ ಅವರಿಗೆ ಸಹಾಯವಾಗಲಿ ಎಂದು ವಿಜಯ್ ತನ್ನ ದುಡಿಮೆಯನ್ನು ಎನ್ಜಿಒಗೆ ಕೊಟ್ಟಿದ್ದನ್ನು ಎಲ್ಲರು ಮೆಚ್ಚಿದ್ದರು. ವಿಜಯ್ ದೇಣಿಗೆ ನೀಡುತ್ತಿದ್ದ ವೇಳೆ ಎನ್ಜಿಒ ನಡೆಸುತ್ತಿದ್ದ ಗೌತಮ್ ಅವರ ಜೊತೆ ಇದ್ದ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದನು. ವಿಜಯ್ ಸಹಾಯ ಗುಣವನ್ನು ಗೌತಮ್ ಅವರು ಕೂಡ ಹಾಡಿ ಹೊಗಳಿದ್ದರು.
https://www.facebook.com/vijju.vijju.338/videos/pcb.2435042530105141/2435031023439625
ಆದರೆ ಇದಾದ ಎರಡು ದಿನಗಳ ಬಳಿಕ ವಿಜಯ್ ಶವ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿತ್ತು. ಅಲ್ಲದೆ ಅಲ್ಲಿಯೇ ಒಂದು ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ಅದರಲ್ಲಿ ನಾನು ಅನಾಥ, ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿತ್ತು. ವಿಜಯ್ ಸಾವಿನ ಬಗ್ಗೆ ತಿಳಿದು ಗೌತಮ್ ಹಾಗೂ ಎನ್ಜಿಒದ ಇತರೆ ಸದಸ್ಯರು ದುಃಖಿಸಿದ್ದರು. ಇತರರಿಗೆ ಒಳ್ಳೆದನ್ನ ಬಯಸಿದ್ದ ವಿಜಯ್ ಅಂತ್ಯಸಂಸ್ಕಾರ ಅನಥವಾಗಿಯೇ ನಡೆಯೋದು ಬೇಡವೆಂದು, ತಮ್ಮ ಎನ್ಜಿಒಗೆ ವಿಜಯ್ ಕೊಟ್ಟಿದ್ದ ಹಣದಿಂದಲೇ ಬುಧವಾರ ಆತನ ಅಂತ್ಯಕ್ರಿಯೆ ಮಾಡಿ, ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.