ಮೈಸೂರು: ದೇವಸ್ಥಾನಗಳಲ್ಲಿ ಡ್ರೆಸ್ಕೋಡ್ (Dresscode in Temple) ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ (Chamundeshwari Temple) ಕ್ಕೆ ಆಗಮಿಸುವ ಭಕ್ತರಿಗೆ ಡ್ರೆಸ್ಕೋಡ್ ಕಡ್ಡಾಯ ಮಾಡಬೇಕೆಂಬ ಕೂಗು ಜೋರಾಗಿದೆ. ಈ ಬಗ್ಗೆ ಹಲವು ಮಹಿಳಾ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳೂ ಕೂಡ ಧ್ವನಿಗೂಡಿಸಿವೆ.
ರಾಜ್ಯದ ಹಾಗೂ ಹೊರ ರಾಜ್ಯದ ಪ್ರಮುಖ ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರಸಂಹಿತೆ ಇದೆ. ಇದೇ ರೀತಿ ನಾಡದೇವತೆ ಚಾಮುಂಡಿ ದರ್ಶನಕ್ಕೂ ವಸ್ತ್ರಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಲಾಗಿದೆ. ಚಾಮುಂಡಿ ದೇವಸ್ಥಾನದಲ್ಲಿ ಈವರೆಗೂ ಯಾವುದೇ ಡ್ರೆಸ್ಕೋಡ್ ಇರಲಿಲ್ಲ. ಹೀಗಾಗಿ ದೇವಾಲಯಕ್ಕೆ ಬರುವ ಭಕ್ತರು ತಮಗಿಷ್ಟ ಬಂದ ಉಡುಪು ಧರಿಸಿ ದೇವಸ್ಥಾನಕ್ಕೆ ಬರುತ್ತಿದ್ರು. ಇದೀಗ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರಸಂಹಿತೆ ಕಡ್ಡಾಯಗೊಳಿಸುವಂತೆ ಮೈಸೂರಿನ ಹಲವು ಮಹಿಳಾ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಮನವಿ ಮಾಡ್ತಿದ್ದಾರೆ. ಇದನ್ನೂ ಓದಿ: ಆರ್ಎಸ್ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ
ದೇವಸ್ಥಾನಕ್ಕೆ ಬರುವ ಕೆಲವು ಮಹಿಳೆಯರು, ಯುವತಿಯರು ಅರೆಬರೆ ಬಟ್ಟೆ ಹಾಕಿಕೊಂಡು ಬರುತ್ತಾರೆ. ಪುರುಷರು ಅರ್ಧ ಚಡ್ಡಿ ಧರಿಸಿ ಬರುತ್ತಾರೆ. ಇದು ದೇವಸ್ಥಾನದ ಗೌರವ, ಪಾವಿತ್ರ್ಯತೆ ವಾತಾವರಣ ಹಾಳು ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಸೀರೆ ಅಥವಾ ಚೂಡಿದಾರ, ಪುರುಷರಿಗೆ ದೇವಸ್ಥಾನ ಪ್ರವೇಶಕ್ಕೆ ಪಂಚೆ ಅಥವಾ ಪ್ಯಾಂಟ್ ಕಡ್ಡಾಯ ಮಾಡಿ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂದು ಹೋರಾಟ ಆರಂಭಿಸಿದ್ದಾರೆ. ಇನ್ನು ಈ ಬಗ್ಗೆ ಸರ್ಕಾರಕ್ಕೆ, ಚಾಮುಂಡಿ ದೇವಸ್ಥಾನದ ಅಧಿಕಾರಿಗಳಿಗೆ ಮನವಿ ಕೊಟ್ಟು ವಸ್ತ್ರಸಂಹಿತೆ ಜಾರಿಗೆ ಆಗ್ರಹಿಸಿದ್ದಾರೆ. ಸರ್ಕಾರ ಇದಕ್ಕೆ ಸ್ಪಂದಿಸದೆ ಇದ್ದರೆ ಬೀದಿಗೆ ಇಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಇತ್ತ ಮಹಿಳಾ ಹಾಗೂ ಕನ್ನಡ ಪರ ಸಂಘಟನೆಗಳ ಕೂಗಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಕೂಡ ದನಿಗೂಡಿಸಿದ್ದು ವಸ್ತ್ರಸಂಹಿತೆ ಅಗತ್ಯವಿದೆ ಎಂದು ಹೇಳುವ ಮೂಲಕ ಹೋರಾಟಕ್ಕೆ ಬಲ ತುಂಬಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ದೇವಾಸ್ಥಾನದ ಆಡಳಿಯ ಮಂಡಳಿ ಹಾಗೂ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಿದೆ.