ಬೆಂಗಳೂರು: ಕೆರಗೋಡಿನಲ್ಲಿ ಧ್ವಜಸ್ತಂಭದಿಂದ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಠಕ್ಕರ್ ಕೊಟ್ಟಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಆರ್.ಅಶೋಕ್, ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ (Hanuma Flag) ಇಳಿಸಿದ ಮೇಲೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ ಸರ್ಕಾರ ಈಗ ದಿಢೀರನೆ ರಾಷ್ಟ್ರ ಧ್ವಜದ ಮೇಲೆ ಎಲ್ಲಿಲ್ಲದ ಭಕ್ತಿ ಉಕ್ಕಿ ಹರಿಯುತ್ತಿದೆ. 2011ರಲ್ಲಿ ಗಣರಾಜ್ಯೋತ್ಸವದ ದಿನದಂದು ಜಮ್ಮು-ಕಾಶ್ಮೀರದ ಶ್ರೀನಗರದ ಲಾಲ್ ಚೌಕ್ನಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಜೆಪಿ ಏಕ್ತಾ ಯಾತ್ರೆ ಕೈಗೊಂಡಿದ್ದಾಗ ರಾಷ್ಟ್ರಧ್ವಜ ಹಾರಿಸಲು ಬಿಡದೆ ಬಿಜೆಪಿ ನಾಯಕರನ್ನು ಬಂದಿಸಿದ್ದು ಇದೇ ಕಾಂಗ್ರೆಸ್ ಪಕ್ಷದ ಸರ್ಕಾರ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹನುಮಧ್ವಜ ತೆರವು ಖಂಡಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್ಐಆರ್
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಾಡುವುದನ್ನೂ ತಡೆದಿದ್ದು ಕೂಡ ಇದೇ ಕಾಂಗ್ರೆಸ್ ಪಕ್ಷ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 75 ವರ್ಷಗಳ ನಂತರ ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡಿದ್ದು ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ. ಕೇಸರಿ, ಕುಂಕುಮ ಕಂಡರೆ ನನಗೆ ಭಯ ಅಂತ ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವ ತಮಗೆ ಹನುಮಧ್ವಜದ ಮೇಲಿನ ನಿಮ್ಮ ದ್ವೇಷವನ್ನ ಮರೆಮಾಚಲು ರಾಷ್ಟ್ರಧ್ವಜದ ಮುಖವಾಡ ಹಾಕಿಕೊಳ್ಳುವ ಅಗತ್ಯ ಏನಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.
ನಮ್ಮ ರಾಷ್ಟ್ರಧ್ವಜದಲ್ಲೇ ಕೇಸರಿ ಬಣ್ಣವಿದೆ. ಕೇಸರಿ ಬಣ್ಣ ಹಿಂದೂ ಧರ್ಮದ ಸಾಧು-ಸಂತರು, ಸನ್ಯಾಸಿಗಳು, ಮಠಾಧಿಪತಿಗಳು ಧರಿಸುವ ಬಣ್ಣ. ಹಿಂದೂಗಳ ಪರಮ ಪವಿತ್ರ ಲಾಂಛನ ಕೇಸರಿ ಬಣ್ಣ. ತ್ಯಾಗದ ಸಂಕೇತವಾದ ಕೇಸರಿ ಬಣ್ಣ ಶಾಶ್ವತವೆ ಹೊರತು ತಮ್ಮ ಅಧಿಕಾರವಲ್ಲ. ತಾವು ಹನುಮ ಧ್ವಜವನ್ನು ಇಳಿಸಿದ ರೀತಿಯಲ್ಲೇ ಹಿಂದೂಗಳು ತಮ್ಮನ್ನು ಕುರ್ಚಿಯಿಂದ ಇಳಿಸುವ ದಿನ ಬಹಳ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿಯೊಬ್ಬರ ಮಗ ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ: ಚಲುವರಾಯಸ್ವಾಮಿ