ಹಾಸನ: ಬೇಲೂರಿನಲ್ಲಿ (Belur) ಕಳೆದ ಭಾನುವಾರದಿಂದ ಆರಂಭಗೊಂಡಿದ್ದ ಮೂರು ಪುಂಡಾನೆಗಳ (Elephant) ಸೆರೆ ಕಾರ್ಯಾಚರಣೆ ಇಂದು ಮತ್ತೊಂದು ಕಾಡಾನೆ ಮಕ್ನಾನನ್ನು ಸೆರೆ ಹಿಡಿದು ಸ್ಥಳಾಂತರಿಸುವ ಮೂಲಕ ಅಂತ್ಯಗೊಂಡಿದೆ.
ಒಂದು ತಿಂಗಳ ಅಂತರದಲ್ಲಿ ನಾಲ್ವರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಮೂರು ಪುಂಡಾನೆಗಳ ಸೆರೆ ಹಿಡಿದು ಸ್ಥಳಾಂತರ ಮಾಡಲು ಅನುಮತಿ ನೀಡಿತ್ತು. ಅದರಂತೆ ಏಳು ಸಾಕಾನೆಗಳು, ಇನ್ನೂರಕ್ಕೂ ಹೆಚ್ಚು ಅರಣ್ಯ ಇಲಾಖೆಯ (Forest Department) ಸಿಬ್ಬಂದಿ, ವೈದ್ಯರುಗಳೊಂದಿಗೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಸೆರೆಹಿಡಿದ ಆನೆಗಳಲ್ಲಿ ಒಂದನ್ನು ಚಾಮರಾಜನಗರದ ಮಲೆಮಹದೇಶ್ವರ ಅರಣ್ಯಕ್ಕೆ ಬಿಟ್ಟರೆ, ಉಳಿದ ಎರಡು ಕಾಡಾನೆಗಳನ್ನು ಸಕ್ಕರೆಬೈಲು ಕ್ಯಾಂಪ್ಗೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಮಲೆನಾಡು ಭಾಗದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಎಟಿಎಫ್ ಸಿಬ್ಬಂದಿಯನ್ನು ಅಟ್ಟಾಡಿಸಿದ್ದ ಕಾಡಾನೆ ವಿಕ್ರಾಂತ್ ಸೆರೆ – ಜೀವ ಪಣಕ್ಕಿಟ್ಟು ಕಾರ್ಯಾಚರಣೆ ಮಾಡಿದ ತಂಡ
ಕಳೆದ ಭಾನುವಾರ ಬೇಲೂರಿನ ಕಾನನಹಳ್ಳಿ ಗ್ರಾಮದಿಂದ ಮೂರು ಪುಂಡಾನೆಗಳ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೊದಲ ದಿನದ ಕಾರ್ಯಾಚರಣೆಯಲ್ಲಿ ಪುಂಡಾನೆಯೊಂದನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿತ್ತು. ಮಂಗಳವಾರದಿಂದ ವಿಕ್ರಾಂತ್ ಕಾಡಾನೆ ಸೆರೆ ಆರಂಭಿಸಿ, ನಿರಂತರ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ವಾಟೀಹಳ್ಳಿ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯಲಾಯಿತು. ಇದಾದ ಎರಡು ದಿನಗಳ ಕಾಲ ಬಿಕ್ಕೋಡು ಬಳಿಯ ತಾತ್ಕಾಲಿಕ ಸಾಕಾನೆ ಶಿಬಿರದಲ್ಲಿ ಸಾಕಾನೆಗಳು, ಮಾವುತರು, ಕಾವಾಡಿಗರು ಎರಡು ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಇಂದು (ಮಾ.23) ಮುಂಜಾನೆ ಜನ-ಜಾನುವಾರುಗಳು, ಬೈಕ್ಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಮಕ್ನಾ ಕಾಡಾನೆಯನ್ನು ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಮುಂಜಾನೆಯೇ ಇಟಿಎಫ್ ಸಿಬ್ಬಂದಿ ಮಕ್ನಾ ಕಾಡಾನೆ ಇದ್ದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಸಕಲೇಶಪುರದ ಹೆಬ್ಬನಹಳ್ಳಿ ಬಳಿಯಿಂದ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಿ, ಆನೆಗೆ ಅರವಳಿಕೆ ನೀಡಿ ಸೆರೆಹಿಡಿಯಲಾಯಿತು. ಸತತ ಮೂರು ಗಂಟೆಗಳ ಕಾಲ ಶ್ರಮಪಟ್ಟು ಕಾಡಾನೆಗೆ ಹಗ್ಗ ಕಟ್ಟಿ ರಸ್ತೆಗೆ ಎಳೆದು ತಂದು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಸಕ್ಕರೆಬೈಲು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಇದನ್ನೂ ಓದಿ: ಕಾಡಾನೆ ಸೆರೆ ಮೊದಲ ದಿನದ ಕಾರ್ಯಾಚರಣೆ ಯಶಸ್ವಿ – ಸತತ 4 ಗಂಟೆಗಳ ನಂತರ ಒಂಟಿಸಲಗ ಸೆರೆ