ಬೆಂಗಳೂರು: ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲಿದೆ. ಈ ನಡುವೆ ಮಾಜಿ ಸಚಿವ ರೋಷನ್ ಬೇಗ್ ಮೂಲಕ ಆಪರೇಷನ್ ಕಮಲಕ್ಕೆ ಮಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಿವಾಜಿನಗರದ ಅನರ್ಹ ಶಾಸಕರಾಗಿರುವ ರೋಷನ್ ಬೇಗ್ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ತಮಗೆ ಹಿನ್ನಡೆಯಾದರೂ ಪರವಾಗಿಲ್ಲ ನನ್ನ ಶತ್ರುಗಳು ಚುನಾವಣೆಯಲ್ಲಿ ಸೋಲಬೇಕೆಂದು ರೋಷನ್ ಬೇಗ್ ಪಣ ತೊಟ್ಟಿದ್ದಾರಂತೆ. ಹಾಗಾಗಿ ತಮ್ಮ ಕ್ಷೇತ್ರದ ಮೂವರು ಕಾಪೋರೇಟರ್ ಗಳನ್ನು ಬಿಜೆಪಿ ಸೇರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಜಯಮಹಲ್ ನ ಗುಣಶೇಖರ್, ರಾಮಸ್ವಾಮಿ ಪಾಳ್ಯ ದ ನೇತ್ರಾವತಿ ಕೃಷ್ಣೇಗೌಡ ಮತ್ತು ಭಾರತಿ ನಗರದ ಶಕೀಲ್ ಅಹಮದ್ ಅವರನ್ನು ಬಿಜೆಪಿಗೆ ಸೆಳೆಯಲು ರೋಷನ್ ಬೇಗ್ ಮುಂದಾಗಿದ್ದಾರೆ. ಸದ್ಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬೆಂಬಲ ಸೂಚಿಸಿದರೆ ಗೆಲುವು ಸುಲಭವಾಗಲಿದೆ ಎಂಬುವುದು ರೋಷನ್ ಬೇಗ್ ಲೆಕ್ಕಾಚಾರ ಎಂದು ಹೇಳಲಾಗಿದೆ.
ಮಂಗಳವಾರ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ರೋಷನ್ ಬೇಗ್ ಮಾತುಕತೆ ನಡೆಸಿದ್ದರು. ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ರೋಷನ್ ಬೇಗ್ ಅವರನ್ನು ಸಮಾಧಾನಪಡಿಸಿ, ಶಿವಾಜಿನಗರದ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಬೆನ್ನಲ್ಲೇ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ಗೆ ತಿರುಗೇಟು ನೀಡಲು ರೋಷನ್ ಬೇಗ್ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.