ಬೆಂಗಳೂರು: ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿಯು ಒಳಗೊಳಗೆ ಪ್ಲಾನ್ ರೂಪಿಸುತ್ತಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಮತ್ತೆ ಸದ್ದು ಮಾಡುತ್ತಿದೆ.
ಆಪರೇಷ್ ಕಮಲ ನಡೆಯುತ್ತಿದೆ. ಬಿಜೆಪಿಯವರು ನಮ್ಮ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂದು ಸಿಎಂ ಆರೋಪಿಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಮತ್ತೆ ಮೈತ್ರಿ ಶಾಸಕರನ್ನು ಸೆಳೆಯುವ ತಂತ್ರ ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಎಂ ಹೇಳಿದ್ದೇನು?:
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೇವೂರಿನಲ್ಲಿ ಮಾತನನಾಡಿದ ಸಿಎಂ, ಇನ್ನೂ ಕೂಡ ಆಪರೇಷನ್ ಕಮಲ ನಡೆಯುತ್ತಿದೆ. ನಿನ್ನೆ ನಮ್ಮ ಶಾಸಕರಿಗೆ ಫೋನ್ ಮಾಡಿ ಮೈತ್ರಿ ಸರ್ಕಾರ ಬೀಳುತ್ತದೆ. ಬಿಜೆಪಿಗೆ ಬನ್ನಿ 10 ಕೋಟಿ ರೂ. ಕೊಡುತ್ತೇವೆ ಎಂದು ಆಮಿಷವೊಡ್ಡಿದ್ದಾರೆ. ಈ ಕುರಿತು ಶಾಸಕರು ರಾತ್ರಿಯೇ ನನಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಮರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಆಪರೇಷನ್ ಕಮಲ ನಡೆಸದಂತೆ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಮೈತ್ರಿ ಸರ್ಕಾರವನ್ನು ಬೀಳಿಸುವ ಯಾವುದೇ ಪ್ರಯತ್ನವನ್ನು ನಾವು ಮಾಡುವುದಿಲ್ಲ. ಜೆಡಿಎಸ್-ಕಾಂಗ್ರೆಸ್ ನಾಯಕರು ಪರಸ್ಪರ ಕಚ್ಚಾಡಿಕೊಂಡು ಸರ್ಕಾರ ಬೀಳಿಸುತ್ತಾರೆ ಎಂದು ಹೇಳಿದ್ದರು.
ಆಪರೇಷನ್ ಕಮಲ ನಡೆಸುತ್ತಿಲ್ಲ ಎಂದು ಹೇಳುತ್ತಲೇ ಮೈತ್ರಿ ಸರ್ಕಾರಕ್ಕೆ ಮೇಜರ್ ಸರ್ಜರಿ ಮಾಡಲು ಬಿ.ಎಸ್.ಯಡಿಯೂರಪ್ಪ ಅವರ ತಂಡ ಮುಂದಾಗಿದೆಯಾ? ಮೈತ್ರಿ ಶಾಸಕರ ಖರೀದಿ ತಂತ್ರ ನಡೆದಿದೆಯಾ ಎನ್ನುವ ಪ್ರಶ್ನೆಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿವೆ.