ಬಳ್ಳಾರಿ: ಸಮ್ಮಿಶ್ರ ಸರ್ಕಾರ ಕೆಡವಲು ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದಾರೆ. ಆದ್ರೆ ಆಪರೇಷನ್ ಕಮಲಕ್ಕೂ ಮುನ್ನವೇ ಕೈ ನಾಯಕರು ಬಿಜೆಪಿ ನಾಯಕನಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ದೋಸ್ತಿ ಸರ್ಕಾರವನ್ನ ಕೆಡವಲು ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ, ಶಾಸಕ ಶ್ರೀರಾಮುಲು ಆಪರೇಷನ್ ಕಮಲಕ್ಕೆ ಕೈ ಹಾಕಿದ್ರೆ, ಅತ್ತ ಕೈ ನಾಯಕರು ಸಹ ಶಾಸಕ ಶ್ರೀರಾಮುಲುಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಶ್ರೀರಾಮುಲು ಆಪ್ತರಾಗಿರುವ ಬಳ್ಳಾರಿ ಜಿಲ್ಲಾ ಪಂಚಾಯ್ತಿನ ಸದಸ್ಯರಿಗೆ ಗಾಳ ಹಾಕಿ ಆಪರೇಷನ್ ಕಾಂಗ್ರೆಸ್ಗೆ ಮುಂದಾಗಿದ್ದಾರೆ. ಬಿಜೆಪಿ ವಶದಲ್ಲಿರೋ ಬಳ್ಳಾರಿ ಜಿಲ್ಲಾ ಪಂಚಾಯ್ತಿನಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತರಲು ಸ್ಕೆಚ್ ಹಾಕಿದ್ದು ಇದಕ್ಕಾಗಿ ಬಿಜೆಪಿ ಅಧ್ಯಕ್ಷರ ವಿರುದ್ಧವೇ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದಾರೆ.
40 ಸದಸ್ಯ ಬಲಾಬಲವಿರುವ ಜಿಲ್ಲಾ ಪಂಚಾಯ್ತಿನಲ್ಲಿ 22 ಬಿಜೆಪಿ ಸದಸ್ಯರಿದ್ರೆ 18 ಕಾಂಗ್ರೆಸ್ ಸದಸ್ಯರಿದ್ದಾರೆ. ಅಲ್ಲದೇ ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ 6 ಸದಸ್ಯರು ಬಿಜೆಪಿಯಿಂದ ಬಂಡಾಯವೆದ್ದು ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿಯ ಆಪ್ತ ಸ್ನೇಹಿತನ ಪತ್ನಿಯೇ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿರೋದು. ಶಾಸಕ ಶ್ರೀರಾಮುಲು ಆಪ್ತನ ಪತ್ನಿಯೇ ಉಪಾಧ್ಯಕ್ಷೆಯಾಗಿರೋದ್ರಿಂದ ಬಿಜೆಪಿ ಸದಸ್ಯರೇ ಇದೀಗ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದಾರೆ.
22 ಬಿಜೆಪಿ ಸದಸ್ಯರ ಪೈಕಿ 15 ಸದಸ್ಯರು ಈಗಾಗಲೇ ಅಧ್ಯಕ್ಷ, ಉಪಾಧ್ಯಕ್ಷರನ್ನ ಕೆಳಗಿಳಿಸುವಂತೆ ಸಭೆ ನಡೆಸಲಾಗಿದೆ. ಈ ಕುರಿತು ಉಪಾಧ್ಯಕ್ಷೆ ದೀನಾ ಮಂಜುನಾಥ ಅವರನ್ನು ಪ್ರಶ್ನೆ ಮಾಡಿದ್ರೆ ನಾವೂ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ ಅಂತಿದ್ದಾರೆ.
ಒಟ್ಟಾರೆ ಬಳ್ಳಾರಿಯಲ್ಲಿ ಬಿಜೆಪಿಯವರಿಂದಲೇ ಬಿಜೆಪಿಯನ್ನು ಮುಗಿಸಲು ಕಾಂಗ್ರೆಸ್ ಮಾಡಿರೋ ಪ್ಲಾನ್ ಸಕ್ಸಸ್ ಆಗುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv