ಮೈಸೂರು/ವಿಜಯಪುರ: ಜಿಲ್ಲೆಯ ಹಣಸೂರು ತಾಲೂಕಿನ ಸಿದ್ದನಕೊಪ್ಪಲು ಗ್ರಾಮದ ಹೊರವಲಯದ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ.
ಕಳೆದ ಒಂದು ವಾರದಿಂದ ಸಿದ್ದನ ಕೊಪ್ಪಲು ಸೇರಿದಂತೆ ಅಕ್ಕಪಕ್ಕದ ಬಡಾವಣೆಯಲ್ಲಿ ಕಾಣಿಸಿಕೊಂಡಿದ್ದ ಚಿರತೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಗ್ರಾಮಸ್ಥರು ಕೃಷಿ ಚಟುವಟಿಕೆಗೆ ಜಮೀನಿಗೆ ತೆರಳು ಭಯಪಡುವಂತಾಗಿತ್ತು. ಮನೆಯ ಮುಂದೆ ಜಾನುವಾರುಗಳನ್ನು ಕಟ್ಟಲು ಸಹ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಹೀಗಾಗಿ ಅರಣ್ಯ ಇಲಾಖೆ ರೈತ ಜಾಕೀರ್ ಬೇಗ್ ಎಂಬವರ ಜಮೀನಿನಲ್ಲಿ ಬೋನು ಇಟ್ಟಿತ್ತು. ಅರಣ್ಯ ಇಲಾಖೆ ಇಟ್ಟ ಬೋನಿಗೆ 4 ವರ್ಷದ ಗಂಡು ಚಿರತೆ ಬಿದ್ದಿದ್ದು, ಗ್ರಾಮಸ್ಥರು ನಿರಾಂತಕವಾಗಿದ್ದಾರೆ.
ಇತ್ತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿಳೆಭಾವಿ ಬಳಿ ಕಾಡಿನಿಂದ ಚಿರತೆ ನಾಡಿಗೆ ಬಂದಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಚಿರತೆ ಕಂಡಿದ್ದು, ಕುರಿಗಾಹಿ ಮಾನಪ್ಪ ಕುರಿ ಮೇಯಿಸಲು ಹೋದಾಗ ಚಿರತೆ ದಾಳಿ ನಡೆಸಿತ್ತು. ಆಗ ಸ್ಥಳದಲ್ಲಿದ್ದ ರೈತರು ಗಲಾಟೆ ಕೇಳಿ ಮಾನಪ್ಪನನ್ನು ಬಿಟ್ಟು ಚಿರತೆ ಪರಾರಿಯಾಗಿತ್ತು.
ಚಿರತೆ ದಾಳಿಯಿಂದಾಗಿ ಮಾನಪ್ಪರ ಮುಖ ಮತ್ತು ಕೈಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಮುಂದಾಗಿದ್ರು. ಆದರೆ ಚಿರತೆ ಅಧಿಕಾರಿಗಳನ್ನು ಬೆನ್ನತ್ತಿ ಬಂದಿತ್ತು. ಹಾಗಾಗಿ ಇಂದು ಚಿರತೆ ಹಿಡಿಯಲು ಶಿವಮೊಗ್ಗದಿಂದ ಅರವಳಿಕೆ ತಜ್ಞರನ್ನು ಕರೆಸಿ ಕಾರ್ಯಚರಣೆ ಪ್ರಾರಂಭಿಸಿದ್ದಾರೆ. ಇನ್ನು ಮೊದಲನೇ ಬಾರಿಗೆ ಚಿರತೆ ನಾಡಿನಲ್ಲಿ ಕಂಡು ಸುತ್ತಮುತ್ತಲಿನ ಜನ ಭಯಭೀತರಾಗಿದ್ದಾರೆ