ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ (Israel Hamas War) ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ (Operation Ajay) ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 230 ಮಂದಿ ಭಾರತೀಯರನ್ನ ಕರೆತರಲಾಗಿದ್ದು, ಈ ಪೈಕಿ ಐವರು ಕನ್ನಡಿಗರೂ ಇದ್ದಾರೆ. ಅವರಿಂದು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಯುದ್ಧಭೂಮಿಯ ಅನುಭವ ಬಿಚ್ಚಿಟ್ಟಿದ್ದಾರೆ.
ಮಹಾರಾಷ್ಟ್ರ ಯುವತಿ ಕಂಡಂತೆ ಇಸ್ರೇಲ್ ಹೇಗಿತ್ತು?
ಕಳೆದ 9 ತಿಂಗಳಿನಿಂದ ಇಸ್ರೇಲ್ನಲ್ಲಿ ಕೆಲಸ ಮಾಡಿಕೊಂಡಿರುವ ಮಹಾರಾಷ್ಟ್ರ ಮೂಲದ ಯುವತಿ ಪ್ರಿಯಾಂಕಾ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿ, ಯುದ್ಧಭೂಮಿಯ ಅನುಭವ ಹಂಚಿಕೊಂಡಿದ್ದಾರೆ. ನಾನು ಇದ್ದ ಅಷ್ಟೂ ದಿನಗಳಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಸಮಸ್ಯೆ ಆಗಿರೋದು. ನಾವು ಇಸ್ರೇಲ್ ಕೇಂದ್ರ ಭಾಗದಲ್ಲಿದ್ದೆವು. ದಕ್ಷಿಣಕ್ಕೆ 120 ಕಿಮೀ ದೂರದಲ್ಲಿದ್ದ ಗಾಜಾಪಟ್ಟಿಯಲ್ಲಿ ದಾಳಿ ನಡೆದಿತ್ತು. ಇದರಿಂದ ಸಾಕಷ್ಟು ಆತಂಕಕ್ಕೆ ಒಳಗಾಗಿದ್ದೆವು ಎಂದು ಹೇಳಿದ್ದಾರೆ.
ನಾವು ಬಂಕರ್ಗಳಲ್ಲಿ ಅಡಗಿ ಕೂರಬೇಕಿತ್ತು. ದಿನಕ್ಕೆ ಎರಡು ಬಾರಿ ಸೈರನ್ ಮಾಡುತ್ತಿದ್ದರು. ಆಗ 9 ನಿಮಿಗಳಷ್ಟೇ ಕಾಲಾವಕಾಶ ಸಿಗುತ್ತಿತ್ತು. ಅಷ್ಟರಲ್ಲೇ ನಾವು ಮತ್ತೊಂದು ಬಂಕರ್ ಸೇರಿಕೊಳ್ಳಬೇಕಿತ್ತು. ದಿನಕ್ಕೆ ಎರಡು ಬಾರಿ ಮಾತ್ರ ಸೈರನ್ ಆಗುತ್ತಿತ್ತು. ಕೆಲವೊಮ್ಮೆ ದಿನಕ್ಕೆ ಒಂದು ಬಾರಿ ಮಾತ್ರ ಆಗುತ್ತಿತ್ತು. ಬಂಕರ್ನಿಂದ ಆಚೆ ಬಂದಾಗ ರಾಕೆಟ್, ಗುಂಡಿನ ಶಬ್ಧ ಕಿವಿಗೆ ಅಪ್ಪಳಿಸುತ್ತಿತ್ತು, ಪರಿಸ್ಥಿತಿ ಸೂಕ್ಷ್ಮವಾಗಿ ಇದ್ದುದರಿಂದ ನಾವು ನೋಡಲು ಸಾಧ್ಯವಾಗಲಿಲ್ಲ. ಆದ್ರೆ ನಾವು ಬಂಕರ್ ನಿಂದ ಮತ್ತೊಂದು ಬಂಕರ್ಗೆ ತೆರಳುತ್ತಿದ್ದ ವೇಳೆ ಅನೇಕ ಇಸ್ರೇಲಿಯನ್ನರು ನನಗೆ ಸಹಾಯ ಮಾಡಿದರು, ಸೇಫ್ ಆಗಿ ಹೋಗಿ ಅಂತಾ ಹೇಳಿದರು. ಅವರ ಹೆಸರೂ ಕೂಡ ನನಗೆ ಗೊತ್ತಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನೂ ಇಸ್ರೇಲ್ ಉತ್ತರ ಭಾಗದಲ್ಲಿ ಮತ್ತು ದಕ್ಷಿಣಕ್ಕೆ ಇರುವ ಗಾಜಾದಲ್ಲಿ ಸಮಸ್ಯೆ ತುಂಬಾ ಸಮಸ್ಯೆಯಾಗಿತ್ತು. ಭಾರತಕ್ಕೆ ಬಂದ ನಂತರ ಆತಂಕವೆಲ್ಲಾ ದೂರವಾಯಿತು. ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಸೇರಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇವೆ. ಶೀಘ್ರದಲ್ಲೇ ಇಸ್ರೇಲ್ ಪರಿಸ್ಥಿತಿಯನ್ನು ನಿಯಂತ್ರಿಸಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ನಾವಿದ್ದ ಜಾಗ ಸೇಫ್:
ಕಳೆದ ಎರಡು ವರ್ಷಗಳಿಂದ ಟೆಲ್ ಅವೀವ್ನಿಂದ 40 ಕಿಮೀ ದೂರದಲ್ಲಿರುವ ಆರ್ಯಲ್ ನಗರದ ವಿಶ್ವವಿದ್ಯಾಲಯದಲ್ಲಿ PHD ಪದವಿ ಮಾಡುತ್ತಿರುವ ವಿಜಯಪುರ ಮೂಲದ ಈರಣ್ಣ ʻಪಬ್ಲಿಕ್ ಟಿವಿʼಯೊಂದಿಗೆ ಮಾತನಾಡಿದ್ದಾರೆ. ನಾವಿದ್ದ 300 ಕಿಮೀ ದೂರದಲ್ಲಿ ಯುದ್ಧ ಶುರುವಾಗಿತ್ತು. ಗಡಿ ಭಾಗಗಳಲ್ಲಿ ಮಾತ್ರ ಸಮಸ್ಯೆಯಿತ್ತು. ಆದ್ರೆ ನಾವಿದ್ದ ಕಡೆ ತುಂಬಾ ಸೇಫ್ ಇತ್ತು, ಯುದ್ಧದ ಅನುಭವವೇ ಆಗಲಿಲ್ಲ ಎಂದು ಹೇಳಿದ್ದಾರೆ.
ಭಾರತ ಸರ್ಕಾರಕ್ಕೆ ಸಲಾಂ:
ನಾವು ಕಳೆದ 2 ವರ್ಷಗಳಿಂದ ಇಸ್ರೇಲ್ನ ಅರಿಯಲ್ ನಗರದಲ್ಲಿ ಇದ್ದೇವೆ. ನಾವಿದ್ದ ಜಾಗದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇತ್ತು. ಎಂದಿನಂತೆ ಕೆಲಕ್ಕೆ ಹೋಗಿ ಬರುತ್ತಿದ್ದೆವು. ಕೆಲವು ಸಂದರ್ಭಗಳಲ್ಲಿ ಮಾತ್ರ ಹೊರಗಡೆ ಹೋಗಬೇಡಿ, ಬಂಕರ್ ವ್ಯವಸ್ಥೆ ಕಲ್ಪಿಸಿದ್ರೆ ಅಲ್ಲಿಗೆ ಸ್ಥಳಾಂತರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದರು. ಕೊನೆಗೆ ಭಾರತಕ್ಕೆ ಬಂದಿದ್ದು ನಿರಾಳ ಎನಿಸಿದೆ. ದೇಶಕ್ಕೆ ಬರಲು ಭಾರತ ಸರ್ಕಾರ ತುಂಬಾ ಸಹಕಾರ ನೀಡಿದ್ದಕ್ಕೆ ಧನ್ಯವಾದ ತಿಳಿಸುತ್ತೇವೆ. ಎಷ್ಟೇ ಆದ್ರೂ ನಮ್ಮ ದೇಶ ನಮ್ಮ ದೇಶವೇ ಎಂದು ಶ್ಲಾಘಿಸಿದರು.
Web Stories