ಶ್ರೀರಾಮನ ಭಕ್ತರಿಗೆ ಮಾತ್ರ ಅಯೋಧ್ಯೆಗೆ ಆಹ್ವಾನ: ಉದ್ಧವ್ ಠಾಕ್ರೆಗೆ ಆಚಾರ್ಯ ಸತ್ಯೇಂದ್ರ ದಾಸ್ ತಿರುಗೇಟು

Public TV
Public TV - Digital Head
1 Min Read

ಲಕ್ನೋ: ಶ್ರೀರಾಮನ ಭಕ್ತರಿಗೆ ಮಾತ್ರ ರಾಮಲಲ್ಲಾ ಪ್ರತಿಷ್ಠಾಪನೆಗೆ ಆಹ್ವಾನ ನೀಡಲಾಗಿದೆ ಎಂದು ಅಯೋಧ್ಯೆ ರಾಮಮಂದಿರದ (Ayodhya Ram Mandir) ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ (Acharya Satyendra Das) ಹೇಳಿದ್ದಾರೆ. ಈ ಮೂಲಕ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರು (Uddhav Thackeray) ನೀಡಿದ್ದ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.

ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ ಎಂದು ಇತ್ತೀಚೆಗೆ ಉದ್ಧವ್ ಠಾಕ್ರೆ ಹೇಳಿದ್ದರು. ಈ ಹೇಳಿಕೆಗೆ ಆಚಾರ್ಯ ಸತ್ಯೇಂದ್ರ ದಾಸ್ ಪ್ರತಿಕ್ರಿಯೆ ನೀಡಿದ್ದು, ರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ. ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂಬ ಮಾತು ತಪ್ಪು. ಪ್ರಧಾನಿ ನರೇಂದ್ರ ಮೋದಿಯವರು ಅಪಾರ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಇದು ಅವರ ರಾಜಕೀಯವಲ್ಲ, ಭಕ್ತಿ ಎಂದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ: ಉದ್ಧವ್‌ ಠಾಕ್ರೆ ಹೀಗಂದಿದ್ಯಾಕೆ..?

ಉದ್ಧವ್ ಠಾಕ್ರೆಯವರು, ರಾಮ ಮಂದಿರ ಉದ್ಘಾಟನೆಗೆ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಅಲ್ಲಿಗೆ ಹೋಗಲು ನನಗೆ ಆಹ್ವಾನದ ಅಗತ್ಯವಿಲ್ಲ. ರಾಮ ಯಾವುದೇ ಪಕ್ಷದ ಆಸ್ತಿಯಲ್ಲ, ರಾಮ ಎಲ್ಲರಿಗೂ ಸೇರಿದವರು. ಹೀಗಾಗಿ ಇದನ್ನು ರಾಜಕೀಯಗೊಳಿಸಬಾರದು ಎಂದು ನಾನು ಬಯಸುತ್ತೇನೆ. ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನೀಡಿದೆ, ಸರ್ಕಾರವಲ್ಲ ಎಂದಿದ್ದರು. ಇತ್ತ ಇತ್ತೀಚೆಗೆ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬಿಜೆಪಿಯು ಲೋಕಸಭಾ ಚುನಾವಣೆಗೆ ಭಗವಾನ್ ರಾಮನೇ ನಮ್ಮ ಅಭ್ಯರ್ಥಿ ಎಂದು ಘೋಷಿಸುವುದು ಮಾತ್ರ ಬಾಕಿ ಉಳಿದಿದೆ ಎಂದಿದ್ದರು.

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆ ಆರಂಭವಾಗಿದೆ. ಜನವರಿ 22 ರಂದು ಶ್ರೀರಾಮ ಮಂದಿರ ಉದ್ಘಾಟನೆ ನೆರವೇರಲಿದ್ದು, ಅಯೋಧ್ಯೆಯಲ್ಲಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಜ.22ರಂದು ಅಯೋಧ್ಯೆಗೆ ಬರುವ ಮನಸ್ಸು ಮಾಡ್ಬೇಡಿ – ರಾಮ ಭಕ್ತರಿಗೆ ಮೋದಿ ವಿನಂತಿ

Share This Article