ಉಡುಪಿ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ ಕುಮಾರಸ್ವಾಮಿ ಪೀಳಿಗೆಯವರು ಟಿಪ್ಪುವನ್ನು ಓದಲಿ. ನಮ್ಮ ರಾಜ್ಯದ ಮಕ್ಕಳು ಟಿಪ್ಪುವನ್ನು ಓದುವ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಿಂದ ಟಿಪ್ಪು ಪಾಠ ಕೈಬಿಟ್ಟ ಸರ್ಕಾರದ ನಡೆಯನ್ನು ಅವರು ಸಮರ್ಥಿಸಿದರು. ಟಿಪ್ಪು ಸುಲ್ತಾನ್ ಒಬ್ಬ ದಾಳಿಕೋರ. ಹಿಂದೂಗಳನ್ನು ಗುಡ್ಡದ ಮೇಲಿಂದ ಟಿಪ್ಪು ತಳ್ಳುತ್ತಿದ್ದ ಮುಂದೆ ಅದು ಟಿಪ್ಪು ಡ್ರಾಪ್ ಆಯ್ತು ಎಂದರು.
ಮದಕರಿ ನಾಯಕನ ವಂಶ ನಿರ್ವಂಶ ಮಾಡಿದ್ದು ಮಂಗಳೂರು ಕ್ರೈಸ್ತರು. ಹಿಂದೂ ವಿರೋಧಿ ಟಿಪ್ಪುವಿನ ಜಯಂತಿ ಆಚರಣೆಯನ್ನು ನಮ್ಮ ಸರ್ಕಾರ ನಿಲ್ಲಿಸಿದೆ. ಟಿಪ್ಪುವನ್ನು ಚರಿತ್ರೆಯಲ್ಲಿ ಯಾಕೆ ದಾಖಲಿಸಬೇಕು? ಅಭಿವೃದ್ಧಿ ಹರಿಕಾರ ಮೈಸೂರು ಮಹಾರಾಜರಿಗೆ ಟಿಪ್ಪು ಮೋಸ ಮಾಡಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಾಲಾ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ತೆಗೆಯಲು ಚಿಂತನೆ – ಸಿಎಂ
ಟಿಪ್ಪುವಿನ ದಾಖಲೆ ಪಠ್ಯದಲ್ಲಿ ಕೂಡ ಇರಬಾರದು. ಚರಿತ್ರೆಯಲ್ಲಿ ಓದಲು ಬಹಳಷ್ಟು ಮಹಾಪುರುಷರಿದ್ದಾರೆ ಅವರ ಬಗ್ಗೆ ಓದೋಣ. ಇಲ್ಲಿ ಇತಿಹಾಸ ತಿರುಚುವ ಪ್ರಶ್ನೆಯೇ ಇಲ್ಲ. ಟಿಪ್ಪುವನ್ನು ಓದಿಕೊಳ್ಳುವವರಿಗೆ ಮಾರುಕಟ್ಟೆಯಲ್ಲಿ, ಲೈಬ್ರೆರಿಯಲ್ಲಿ ಪುಸ್ತಕಗಳಿವೆ. ಬೆನ್ನಿಗೆ ಚೂರಿ ಹಾಕಿದವನ ಚರಿತ್ರೆಯನ್ನು ನಮ್ಮ ಮಕ್ಕಳು ಓದುವ ಅಗತ್ಯವಿಲ್ಲ. ಸಿದ್ದರಾಮಯ್ಯ, ಹೆಚ್ಡಿಕೆಯ ಪೀಳಿಗೆ ಅದನ್ನು ಓದಲಿ ಎಂದು ತಿರುಗೇಟು ನೀಡಿದರು. ಟಿಪ್ಪು ಜಯಂತಿ ಆಚರಿಸುವುದಾಗಿ ಹೇಳಿರುವ ಬಿಜೆಪಿ ಪದಾಧಿಕರಿ ಶರತ್ ಬಚ್ಚೇಗೌಡ ಅವರನ್ನು ಕರೆಸಿ ಮಾತನಾಡುತ್ತೇವೆ ಎಂದರು. ಇದನ್ನೂ ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ
ಇದೇ ವೇಳೆ ಮಾಜಿ ಲೋಕಾಯುಕ್ತ ವೆಂಕಟಾಚಲ ನಿಧನಕ್ಕೆ ಸಂಸದೆ ಸಂತಾಪ ವ್ಯಕ್ತಪಡಿಸಿದರು. ಕರ್ನಾಟಕದ ಲೋಕಾಯುಕ್ತ ಬಲಪಡಿಸಲು ಅವರ ಪಾತ್ರ ಮಹತ್ವದ್ದಾಗಿದೆ. ವೆಂಕಟಾಚಲ ಅಗಲುವಿಕೆ ದುಃಖ ತಂದಿದೆ. ಅವರು ಹಾಕಿಕೊಟ್ಟ ದಾರಿ, ಕಾನೂನಿನ ಕೊಡುಗೆ ಮುಂದಿನ ಸರ್ಕಾರಗಳು ಪಾಲಿಸಬೇಕು ಎಂದರು.
ನಮ್ಮ ಸರ್ಕಾರ ಲೋಕಾಯುಕ್ತ ಬಲಪಡಿಸಿದ್ದೆವು. ಸಿದ್ದರಾಮಯ್ಯ ಲೋಕಾಯುಕ್ತವನ್ನು ಕೊಂದು ಹಾಕಿದ್ರು ಎಂದು ಆರೋಪಿಸಿದರು. ಲೋಕಾಯುಕ್ತವನ್ನು ಹಲ್ಲಿಲ್ಲದ ಹಾವು ಮಾಡಿದ್ರು. ಅವರ ಪ್ರಕರಣಗಳನ್ನೆಲ್ಲ ಎಸಿಬಿ ಮೂಲಕ ಮುಚ್ವಿಹಾಕಿದ್ರು. ಮುಂದಿನ ದಿನಗಳಲ್ಲಿ ಲೋಕಾಯುಕ್ತವನ್ನು ಬಲಪಡಿಸುವ ಚರ್ಚೆ ಮಾಡುತ್ತೇವೆ ಎಂದರು.