ಬೆಳಗಾವಿ: ಆನ್ಲೈನ್ ನಲ್ಲಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗನ್ನು ಬೆಳಗಾವಿಯ ಉದ್ಯಮಬಾಗ ಠಾಣೆ ಇನ್ಸ್ಪೆಕ್ಟರ್ ಎಸ್.ಸಿ ಪಾಟೀಲ್ ನೇತೃತ್ವದ ತಂಡ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧತರನ್ನು ಧಾರವಾಡ ತಾಲೂಕಿನ ಹೊಸ ತೇಗೂರು ಗ್ರಾಮದ ಬಸವರಾಜ ಗೋಕಾವಿ, ಮಂಜುನಾಥ ದೊಡ್ಡಮನಿ, ಬಸವರಾಜ ಬೆಳವಡಿ, ಮಡಿವಾಳಪ್ಪ ಗರಗದ ಎಂದು ಗುರುತಿಸಲಾಗಿದೆ.
ಆರೋಪಿಗಳು ಓಎಲ್ಎಕ್ಸ್ನಲ್ಲಿ ನಕಲಿ ಖಾತೆ ಸೃಷ್ಟಿಸಿ ಅಮಾಯಕರಿಗೆ ವಂಚಿಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಒಂದು ತಿಂಗಳ ಬಳಿಕ ವಂಚಕರ ತಂಡವನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ವಂಚನೆಗೆ ಬಳಸಿದ್ದ ಇಂಡಿಕಾ ಕಾರು 1ಲಕ್ಷ 80 ಸಾವಿರ ನಗದು ಮೊಬೈಲ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಓಎಲ್ಎಕ್ಸ್ನಲ್ಲಿ ಸ್ವಿಪ್ಟ್ ಕಾರ್ ಮಾರಾಟ ಮಾಡುವುದಾಗಿ ಹೇಳಿ ಬೆಂಗಳೂರಿನ ಹೆಬ್ಬಾಳ ಮೂಲದ ಮೊಹಮ್ಮದ್ ಶಹಬಾಜ್ ಬ್ರದರ್ಸ್ಗೆ ವಂಚಕರು ಮೋಸ ಮಾಡಿದ್ದರು. ಬೆಳಗಾವಿ ಮೂಲದ ಫೈಜುಲ್ಲಾ ತನ್ನ ಸ್ವಿಪ್ಟ್ ಕಾರಿನ ಫೋಟೋವನ್ನು ಓಎಲ್ಎಕ್ಸ್ನಲ್ಲಿ ಮಾರಾಟಕ್ಕಾಗಿ ಹಾಕಿದ್ದರು. ಓಎಲ್ಎಕ್ಸ್ನಲ್ಲಿ ಹಾಕಿದ್ದ ಫೈಜುಲ್ಲಾ ಅವರ ಕಾರಿನ ಫೋಟೋ ಸ್ಕ್ರೀನ್ ಶಾಟ್ ತೆಗೆದು, ಆರೋಪಿಗಳು ಬೇರೆ ಖಾತೆ ಸೃಷ್ಟಿಸಿದ್ದಾರೆ. ಬಳಿಕ ಇದನ್ನು ನೋಡಿ ಕಾರು ಖರೀದಿಸಲು ಬಂದಿದ್ದ ಮೊಹಮ್ಮದ್ ಶಹಬಾಜ್ ಬ್ರದರ್ಸ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಚೂರಿ ತೋರಿಸಿ, ಅವರ ಬಳಿಯಿದ್ದ 2 ಲಕ್ಷ 80 ಸಾವಿರ ಹಣ, ಮೊಬೈಲ್ ದೋಚಿ ಖದೀಮರ ಗ್ಯಾಂಗ್ ಪರಾರಿಯಾಗಿತ್ತು.
ಸದ್ಯ ಆರೋಪಿಗಳನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv