ನವದೆಹಲಿ: ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ಬಿಜೆಪಿ ಘೋಷಣೆ ಮಾಡಿದಂತೆ ಬಹು ನಿರೀಕ್ಷೆಯ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಅನುಮತಿ ನೀಡುವ ಒಂದು ದೇಶ, ಒಂದು ಚುನಾವಣೆ (One Nation One Election) ಮಸೂದೆ ಇಂದು ಲೋಕಸಭೆಯಲ್ಲಿ (Lok Sabha) ಮಂಡನೆಯಾಗಿದೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ (Law Minister Arjun Meghwal) ಇಂದು ಲೋಕಸಭೆಯಲ್ಲಿ ಸಂವಿಧಾನ (ನೂರ ಇಪ್ಪತ್ತೊಂದನೇಯ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆಯನ್ನುಮಂಡಿಸಿದರು.
ಮಸೂದೆ ಮಂಡನೆಯ ಬೆನ್ನಲ್ಲೇ INDIA ಒಕ್ಕೂಟದ ಸದಸ್ಯರು ಭಾರೀ ವಿರೋಧ ವ್ಯಕ್ತಪಡಿಸಿದರು. ಸಂಸದ ಮನೀಶ್ ತಿವಾರಿ, ಕೇಂದ್ರ ಮತ್ತು ರಾಜ್ಯದ ಅವಧಿಯನ್ನು ಹೇಗೆ ಏಕ ಕಾಲದಲ್ಲಿ ಮಾಡಲು ಸಾಧ್ಯ? ಭಾರತ ಒಕ್ಕೂಟ ದೇಶ, ಕೇಂದ್ರೀಕರಣ ಮಾಡುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ತಿದ್ದುಪಡಿ ಎಂದು ಕಿಡಿಕಾರಿದರು.
ಎಲ್ಲ ರಾಜ್ಯಗಳು ಬೇರೆ ಬೇರೆ ವೈವಿಧ್ಯತೆ ಹೊಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಒಕ್ಕೂಟ ವ್ಯವಸ್ಥೆ ಮಾಡಿದರು. ಎಂಟು ವಿಧಾನಸಭೆ ಕ್ಷೇತ್ರಗಳ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ಮಾಡಲು ಸಾಧ್ಯವಾಗಲಿಲ್ಲ. ನಾಲ್ಕು ರಾಜ್ಯಗಳ ಚುನಾವಣೆ ಒಟ್ಟಿಗೆ ಮಾಡಲು ಸಾಧ್ಯವಾಗಲಿಲ್ಲ. ಈಗ ಇಡೀ ದೇಶದಲ್ಲಿ ಒಟ್ಟಿಗೆ ಚುನಾವಣೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ ಎಂದು ಎಂದು ಎಸ್ಪಿ ಸಂಸದ ಧರ್ಮೇಂದ್ರ ಯಾದವ್ ವಿರೋಧ ವ್ಯಕ್ತಪಡಿಸಿದರು.
ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡಿ, ಇದು ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುವುದಿಲ್ಲ. ಒಕ್ಕೂಟ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲ. ಭಾರತದ ಒಕ್ಕೂಟ ವ್ಯವಸ್ಥೆಯಿಂದ ಹೊರ ಹೋಗಲು ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ. ಈ ಮಸೂದೆ ಆಕಸ್ಮಿಕವಾಗಿ ಬಂದಿಲ್ಲ. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿ ವಿಸ್ತೃತ ಚರ್ಚೆ ಮಾಡಿ ಶಿಫಾರಸ್ಸು ನೀಡಿದೆ. 21 ವರ್ಷದಿಂದ ಈ ವಿಷಯ ಬಾಕಿ ಉಳಿದಿದ್ದು ಯಾರು ಈ ಬಗ್ಗೆ ಗಮನ ಹರಿಸಿಲ್ಲ. ನರೇಂದ್ರ ಮೋದಿ ಅವರು ಈ ಬಗ್ಗೆ ಗಮನಹರಿಸಿದ್ದು ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ನೀಡಲು ಇಚ್ಛಿಸುತ್ತೇವೆ ಎಂದು ತಿಳಿಸಿದರು.
ಮಸೂದೆ ಮಂಡನೆಯ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಕಾಂಗ್ರೆಸ್, ಟಿಡಿಪಿ ಸೇರಿದಂತೆ ಎನ್ಡಿಎ ಮಿತ್ರ ಪಕ್ಷಗಳು ಸದಸ್ಯರಿಗೆ ವಿಪ್ ಜಾರಿ ಮಾಡಿವೆ.