ಉಡುಪಿ: ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದ್ದರು. ಹಿಂದೊಮ್ಮೆ ನಮ್ಮ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದರು ಎಂದು ಕಾಂಗ್ರೆಸ್ನ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ರಾಜಕೀಯ ಬಾಂಬ್ ಹಾಕಿದ್ದಾರೆ.
ಉಡುಪಿಯ ಪೆರ್ಡೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹಳೆಯ ಕಥೆಯನ್ನು ಬಿಚ್ಚಿಟ್ಟ ಸೊರಕೆ, ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ -ಸಂಘಪರಿವಾರದ ಜನ ಅಲ್ಲ. ಬಿಜೆಪಿಯವರಿಗೆ ಬೊಮ್ಮಾಯಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಂಡಿರುವುದು ಸಹಿಸಲಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್ವೈ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಪರೇಷನ್ ಕಾಂಗ್ರೆಸ್ ಸದ್ದಿಲ್ಲದೆ ನಡೆಯುತ್ತದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಚುನಾವಣೆ ಸಂದರ್ಭ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂದು ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯ ಕೆಲ ಶಾಸಕರು ಅತಂತ್ರದಲ್ಲಿ ಇದ್ದಾರೆ. ಈ ಹಿಂದೆ ಬೊಮ್ಮಾಯಿ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂದರು. ಇದನ್ನೂ ಓದಿ: ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ, ಬೆಲೆ ಸತತವಾಗಿ ಹೆಚ್ಚಳವಾಗಿದೆ: ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ ಸಂಘಪರಿವಾರದ ಜನ ಅಲ್ಲ. ಬೊಮ್ಮಾಯಿಯವರ ತಂದೆ ಜೆಡಿಎಸ್ನಲ್ಲಿ ಇದ್ದವರು. ಎಂ.ಪಿ ಪ್ರಕಾಶ್ ಕಾಂಗ್ರೆಸ್ ಸೇರುವಾಗ ಬೊಮ್ಮಾಯಿ ಕೂಡ ನಮ್ಮನ್ನು ಸಂಪರ್ಕ ಮಾಡಿದ್ದರು. ಬೊಮ್ಮಾಯಿ ಜಾತ್ಯಾತೀತ ನಿಲುವು ಇರುವವರು. ಜಾತ್ಯಾತೀತ ನಿಲುವನ್ನು ಬಿಜೆಪಿಯವರು ಸಹಿಸುತ್ತಾರಾ? ಬಿಜೆಪಿಯವರಿಗೆ ಯು.ಪಿಯ ಯೋಗಿಯಂತ ಜನ ಬೇಕು. ಬೊಮ್ಮಾಯಿ ಸಿಎಂ ಆಗಿ ಎಷ್ಟು ಸಮಯ ಇರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ