– ನಾಪತ್ತೆಯಾದ ಒಂದು ಗಂಟೆಯಲ್ಲೆ ಪತ್ತೆ
ಬೆಂಗಳೂರು: ಕಿಡ್ನಾಪ್ ಆಗಿದ್ದ ಒಂದು ತಿಂಗಳ ಹಸುಗೂಸು ಒಂದೇ ಗಂಟೆಯಲ್ಲಿ ಶವವಾಗಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದೆ.
ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಂತಕರು ಹಸುಗೂಸನ್ನು ಉಸಿರುಗಟ್ಟಿಸಿ ಕೊಂದು, ಟವೆಲ್ನಲ್ಲಿ ಸುತ್ತಿ ಮಂಚದ ಕೆಳಗಿಟ್ಟು ಪರಾರಿಯಾಗಿದ್ದಾರೆ. ವಿವೇಕನಗರ ನಿವಾಸಿ ಕಾರ್ತಿಕ್ ಎಂಬವರಿಗೆ ಅವಳಿ ಮಕ್ಕಳಲ್ಲಿ ಒಂದು ಹಸುಗೂಸು ಕಗ್ಗೊಲೆಯಾಗಿದೆ.
ಏನಿದು ಪ್ರಕರಣ?
ಒಂದು ತಿಂಗಳ ಹಿಂದೆ ಕಾರ್ತಿಕ್ ದಂಪತಿಗೆ ಅವಳಿ ಮಕ್ಕಳಾಗಿದ್ದವು. ಆದರೆ ದಿನಾಂಕ 21 ಶುಕ್ರವಾರ ರಾತ್ರಿ ಒಂದು ಹಸುಗೂಸು ಜ್ವರದಿಂದ ಬಳಲುತ್ತಿತ್ತು. ಬಳಿಕ ಮಗುವನ್ನು ಹಾಲ್ನಲ್ಲಿದ್ದ ಬೆಡ್ ಮೇಲೆ ಮಲಗಿಸಿ ಔಷಧಿ ತರಲು ಕಾರ್ತಿಕ್ ಹೋಗಿದ್ದರು. ಅದೇ ವೇಳೆ ಮೊತ್ತೊಂದು ಮಗು ಅಳುತ್ತಿತ್ತು. ತಾಯಿ ಆ ಮಗುವನ್ನು ಎತ್ತಿಕೊಂಡು ರೂಂಗೆ ಹೋಗಿ ಹಾಲು ಕುಡಿಸುತ್ತಿದ್ದರು. ಇತ್ತ ತಂದೆ ಕಾರ್ತಿಕ್ ಔಷಧಿ ತರಲು ಹೋದ 10 ನಿಮಿಷದಲ್ಲಿ ಮಗು ನಾಪತ್ತೆಯಾಗಿದೆ.
ಮಗು ಕಾಣದಿದ್ದಾಗ ದಂಪತಿ ಬಿಕ್ಕಿ ಬಿಕ್ಕಿ ಅತ್ತು, ಸುತ್ತಮುತ್ತಾ ಹುಡುಕಾಡಿದ್ದರು. ಆದರೆ ಮಗು ಎಲ್ಲೂ ಪತ್ತೆಯಾಗಿಲ್ಲ. ಕೊನೆಗೆ ಅಶೋಕನಗರ ಪೊಲೀಸರಿಗೆ ಮಾಹಿತಿ ನೀಡಿ ಅವರ ಜೊತೆಗೆ ಕಾರ್ತಿಕ್ ಮನೆಗೆ ಬಂದಿದ್ದರು. ಪೊಲೀಸರ ಜೊತೆ ಇಡೀ ಏರಿಯಾವನ್ನೆಲ್ಲಾ ಕಾರ್ತಿಕ್ ಹಾಗೂ ಕುಟುಂಬಸ್ಥರು ಹುಡುಕಾಡಿದ್ದರು. ಆದರೆ ಮಗು ಮಾತ್ರ ಪತ್ತೆಯಾಗಿರಲಿಲ್ಲ. ಮಗು ಸಿಗದೇ ಇದ್ದಾದ ಮನೆಯ ಬಳಿ ಪೊಲೀಸರು ಬಂದಿದ್ದಾರೆ. ಆಗ ಮಗು ಬೆಡ್ ಕೆಳಗಡೆ ಟವಲ್ನಲ್ಲಿ ಸುತ್ತಿಟ್ಟ ಹಾಗೇ ಶವವಾಗಿ ಪತ್ತೆಯಾಗಿದೆ.
ಇತ್ತೀಚೆಗೆ ಸಹೋದರ ಹಾಗೂ ತಂದೆಯಿಂದ ದೂರವಾಗಿ ಪತ್ನಿಯೊಡನೆ ಕಾರ್ತಿಕ್ ವಾಸವಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕಾರ್ತಿಕ್ ಸಹೋದರ ಹಾಗೂ ಆತನ ತಂದೆ ಹತ್ಯೆಗೈದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಘಟನೆ ಸಂಬಂಧ ಅಶೋಕ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv