ಬಾಗಲಕೋಟೆ: ಪಾದಚಾರಿಯ ಮೇಲೆ ಲಾರಿ ಹರಿದ ಪರಿಣಾಮ ವೃದ್ಧ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ನವನಗರದ ಜಿಲ್ಲಾಡಳಿತ ಭವನದ ಕ್ರಾಸ್ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಮಲೀಕಸಾಬ್ ಬಾಗವಾನ (85) ಮೃತ ವೃದ್ಧ. ಮಲೀಕಸಾಬ್ ನವನಗರದ ಎಂಟನೇಯ ಸೆಕ್ಟರ್ ನಿವಾಸಿಯಾಗಿದ್ದು, ಬೆಳಗಿನ ಜಾವ ಎಂದಿನಂತೆ ವಾಕಿಂಗ್ ಮಾಡಲು ಮನೆಯಿಂದ ಹೊರಬಂದಿದ್ರು. ಈ ವೇಳೆ ಅವರ ಮೇಲೆ ಲಾರಿ ಹರಿದಿದೆ.
ಲಾರಿ ಹಾಯ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಲೀಕಸಾಬ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮಲೀಕಸಾಬ್ ಸಂಬಂಧಿಗಳು ಲಾರಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.