ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ (Ayodhya) ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿದೆ. ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ರಾಮಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿವೆ.
ಪ್ರತಿಷ್ಠಾ ದ್ವಾದಶಿಯಂದು ಬಾಲರಾಮಮೂರ್ತಿಗೆ ಮಹಾ ಅಭಿಷೇಕ ಮಾಡಲಾಯಿತು. ನಂತರ ಅವರ ಮಂಗಲ ದರ್ಶನ ನಡೆಯಿತು. ಈ ವಿಶೇಷ ದಿನದಂದು ರಾಮಮಂದಿರವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಮಲಲ್ಲಾನ (Ram Lalla) ದರ್ಶನ ಪಡೆದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್ ಹೂವು
ಅಯೋಧ್ಯೆಯಲ್ಲಿ ಹಬ್ಬದ ವಾತಾವರಣವೇ ಇತ್ತು. ಭಕ್ತರು ನೃತ್ಯ ಮಾಡುತ್ತಾ ಮತ್ತು ಹಾಡುತ್ತ ಮೆರವಣಿಗೆ ಸಾಗಿ ರಾಮಲಲ್ಲಾನ ಆಸ್ಥಾನಕ್ಕೆ ಬಂದ ದೃಶ್ಯಗಳು ಕಂಡುಬಂದವು. ಎಲ್ಲರೂ ಶ್ರೀರಾಮನ ಭಕ್ತಿಯಲ್ಲಿ ಮಿಂದೆದ್ದರು. ಆರಾಧ್ಯ ದೈವ ರಾಮನ ದರ್ಶನಕ್ಕೆ ಕುಟುಂಬ ಸಮೇತರಾಗಿ ಭಕ್ತರು ಆಗಮಿಸಿದ್ದರು.
ಧಾರ್ಮಿಕ ಕಾರ್ಯಗಳಲ್ಲಿ, ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ಇದಾದ ನಂತರ ಮಹಾ ಆರತಿ ಮಾಡಲಾಯಿತು. ನಂತರ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ರಾಜಭೋಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ರಾಮಲಲ್ಲಾ ವಿರಾಜಮಾನನಾಗಿರುವ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರ ನೇತೃತ್ವದಲ್ಲಿ ಮಹಾ ಆರತಿ ನೆರವೇರಿಸಲಾಯಿತು. ಮಹಾ ಆರತಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮ ಮಂದಿರ ಸಂಕೀರ್ಣದ ಅಂಗದ್ ತಿಲಾದಲ್ಲಿ ಪ್ರತಿಷ್ಠಾ ದ್ವಾದಶಿ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಸಂತರು ಮತ್ತು ಮಹಾಂತರೊಂದಿಗೆ ಅನ್ನ ಪ್ರಸಾದ ಸ್ವೀಕರಿಸಿದರು.