ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳು ದಿನ ಕಳೆದಂತೆ ಹೆಚ್ಚಾಗುತ್ತಿವೆ. 15 ರಾಜ್ಯಗಳಲ್ಲಿ 224ಕ್ಕೂ ಹೆಚ್ಚು ಪ್ರಕರಣಗಳು ವರದಿ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಾಳೆ ಪ್ರಧಾನಿ ನರೇಂದ್ರ ಮೋದಿ ಉನ್ನತಮಟ್ಟದ ಸಭೆ ನಡೆಸಿ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ.
ದೆಹಲಿಯಲ್ಲಿ 57, ಮಹಾರಾಷ್ಟ್ರದಲ್ಲಿ 54, ತೆಲಂಗಾಣದಲ್ಲಿ 24, ಕರ್ನಾಟಕದಲ್ಲಿ 19, ರಾಜಸ್ತಾನದಲ್ಲಿ 18, ಕೇರಳದಲ್ಲಿ 15, ಗುಜರಾತ್ನಲ್ಲಿ 14 ಪ್ರಕರಣಗಳು ವರದಿ ಆಗಿವೆ. ಜಮ್ಮುಕಾಶ್ಮೀರದಲ್ಲಿ ಮೂರು ಓಮಿಕ್ರಾನ್ ಕೇಸ್ ಪತ್ತೆ ಆಗಿವೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ – ಪೊಲೀಸ್ ಅಧಿಕಾರಿ, ನಾಗರಿಕ ಹತ್ಯೆ
ಈ ಮಧ್ಯೆ, ಬೂಸ್ಟರ್ ಡೋಸ್ ಯಾವತ್ತಿನಿಂದ ಕೊಡ್ತೀರಾ ಎಂದು ಎಐಸಿಸಿ ಮುಖಂಡ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಇನ್ನೂ ತುಂಬಾ ಮಂದಿಗೆ ದೇಶದಲ್ಲಿ ಲಸಿಕೆ ಸಿಕ್ಕಿಲ್ಲ. ಕೇವಲ ಶೇಕಡಾ 42 ಮಂದಿಗಷ್ಟೇ ಕಂಪ್ಲೀಟ್ ಡೋಸ್ ನೀಡಲಾಗಿದೆ ಅಷ್ಟೇ ಎಂಬುದನ್ನು ಟ್ವಿಟ್ಟರ್ನಲ್ಲಿ ನೆನಪಿಸಿದ್ದಾರೆ. ಈ ನಡುವೆ ಕನಿಷ್ಠ ಒಂದು ಡೋಸ್ ಪಡೆಯದ ಸರ್ಕಾರಿ ನೌಕರರಿಗೆ ವೇತನ ನೀಡಲ್ಲ ಎಂದು ಪಂಜಾಬ್ ಸರ್ಕಾರ ಆದೇಶ ನೀಡಿದೆ. ವೇತನಕ್ಕೆ ವ್ಯಾಕ್ಸಿನ್ ಸರ್ಟಿಫಿಕೇಟ್ ತೋರಿಸೋದು ಕಡ್ಡಾಯ ಪಡಿಸಿದೆ.
ವಿದೇಶಗಳತ್ತ ಗಮನಿಸಿದರೆ ಇಸ್ರೇಲ್ನಲ್ಲಿ ಓಮಿಕ್ರಾನ್ಗೆ ಮೊದಲ ಸಾವು ಸಂಭವಿಸಿದೆ. ಹೀಗಾಗಿ ಅಲ್ಲಿ ನಾಲ್ಕನೇ ಡೋಸ್ ವಿತರಣೆಗೆ ಕಸರತ್ತು ಆರಂಭವಾಗಿದೆ. ಈ ಮಧ್ಯೆ, ಆಸ್ಟ್ರೇಲಿಯಾದಲ್ಲಿ ರಕ್ತ ತೆಳುವಾಗಲು ಬಳಸುವ ಹೆಪರಿನ್ ಎಂಬ ಔಷಧಿಯನ್ನು ಓಮಿಕ್ರಾನ್ ಸೋಂಕಿತರ ಮೇಲೆ ಪ್ರಯೋಗಿಸಲಾಗಿದ್ದು, ಇದು ಯಶಸ್ವಿಯಾಗಿದೆ. ಮೂಗಿನ ಮೂಲಕ ಸೋಂಕಿತನಿಗೆ ಔಷಧಿ ನೀಡಿದ ಬಳಿಕ ವೈರಸ್ ವ್ಯಾಪಿಸಿದ ಕುರುಹು ಕಂಡುಬಂದಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ