ಹಾವೇರಿ: ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡು ಹೆತ್ತ ತಾಯಿಯನ್ನೇ ಮನೆಯಿಂದ ಹೊರಹಾಕಿದ್ದ ಮಕ್ಕಳ ವಿರುದ್ಧ ಹೋರಾಟ ಮಾಡಿ ಮರಳಿ ಆಸ್ತಿ ಪಡೆದುಕೊಂಡಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 76 ವರ್ಷದ ವೃದ್ಧ ತಾಯಿ ಪ್ರೇಮವ್ವ ಹವಳಣ್ಣನವರ ಹೋರಾಟಕ್ಕೆ ಜಯಸಿಕ್ಕಿದೆ. ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನ ಹೊಂದಿದ್ದಾರೆ. ಪತಿ ಶ್ರೀಕಾಂತ ನಿಧನರಾದ ನಂತರ ಪತಿ ಹೆಸರಿನಲ್ಲಿದ್ದ 3 ಎಕರೆ 32 ಗುಂಟೆ ಜಮೀನನ್ನ ಇಬ್ಬರು ಗಂಡು ಮಕ್ಕಳಾದ ಧನಿಕುಮಾರ ಮತ್ತು ಸಂತೋಷ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಅಲ್ಲದೆ ಗ್ರಾಮದಲ್ಲಿದ್ದ ಎರಡೂ ಮನೆಗಳನ್ನ ತಮ್ಮ ಹೆಸರಿಗೆ ಮಾಡಿಕೊಂಡು ಹೆತ್ತ ತಾಯಿಗೆ ಕಿರುಕುಳ ನೀಡಿ ತಾಯಿಯನ್ನ ಮನೆಯಿಂದ ಹೊರಹಾಕಿದ್ದರು. ಇದನ್ನೂ ಓದಿ: ತಲೆಗೆ ನೀರಿನ ಬದಲು ಎಂಜಲು ಉಗಿದ ಕೇಶವಿನ್ಯಾಸಕಾರ!
ಒಂದೂವರೆ ವರ್ಷದಿಂದ ಹಾವೇರಿಯ ಈಡಾರಿ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಾಸವಾಗಿದ್ದರು. ಸಾಂತ್ವನ ಕೇಂದ್ರದ ನೆರವಿನಿಂದ ಸವಣೂರು ಉಪವಿಭಾಗಾಧಿಕಾರಿಗೆ ಆಸ್ತಿ ಬಿಡಿಸಿಕೊಡುವಂತೆ ಪ್ರೇಮವ್ವ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಉಪವಿಭಾಗಧಿಕಾರಿ ಮಕ್ಕಳಿಂದ ತಾಯಿಯ ಹೆಸರಿಗೆ ಜಮೀನು ಮತ್ತು ಮನೆಯನ್ನ ಬಿಡಿಸಿಕೊಟ್ಟಿದ್ದಾರೆ.
ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್ ರಿಂದ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಸಮ್ಮುಖದಲ್ಲಿ ಪ್ರೇಮವ್ವಳಿಗೆ ಮನೆ ಹಾಗೂ ಜಮೀನಿನ ದಾಖಲೆಗಳನ್ನ ನೀಡಲಾಯಿತು. ಮಕ್ಕಳ ಕಿರುಕುಳ ನೆನೆದು ತಾಯಿ ಕಣ್ಣೀರು ಹಾಕಿ, ಆಸ್ತಿಮರಳಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.