ಬೆಂಗಳೂರು: ಕರುನಾಡ ರಾಜರತ್ನ ಡಾ. ಪುನೀತ್ ರಾಜ್ಕುಮಾರ್ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಪುನೀತ್ ಹುಟ್ಟುಹಬ್ಬವಾಗಿರುವ ಈ ವಿಶೇಷ ದಿನದಂದು ವೃದ್ಧೆಯೊಬ್ಬರು ಕಡ್ಲೆಪುರಿ ಹಾರ ತಯಾರಿಸಿಕೊಂಡು ಅಪ್ಪು ಸಮಾಧಿಗೆ ಆಗಮಿಸಿದ್ದರು.
ಗುಬ್ಬಿತಾಲ್ಲೂಕು ಮರಾಠಿಪಾಳ್ಯದಿಂದ ಬೆಂಗಳೂರಿನ ಕಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಸುಮಿತ್ರಾಬಾಯಿ ಎಂಬ ವೃದ್ಧೆ 40 ಎಳೆ ದಾರದಿಂದ ಪೋಣಿಸಿರುವ ಕಡ್ಲೆಪುರಿ ಹಾರವನ್ನು ತಯಾರಿಸಿಕೊಂಡು ಬಂದಿದ್ದು ಎಲ್ಲರ ಗಮನ ಸೆಳೆಯಿತು. ಇದನ್ನೂ ಓದಿ: ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ
ಇದೇ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸುಮಾರು 15 ದಿನಗಳಿಂದ 40 ಎಳೆ ದಾರದಿಂದ ಕಡ್ಲೆಪುರಿಯ ಹಾರವನ್ನು ಪೋಣಿಸಲಾಗಿದೆ. ಕಡ್ಲೆಪುರಿ ಹಾಗೂ ಸಿಹಿ ಬತಾಸಿನ ಮೂಲಕ ಹಾರ ತಯಾರಿಸಿರುವುದಾಗಿ ತಿಳಿಸಿದ್ದಾರೆ. ಪ್ರತಿ ವರ್ಷ ರಾಜ್ಕುಮಾರ್ ಅವರ ಹುಟ್ಟುಹಬ್ಬದಂದು ಕಡ್ಲೆಪುರಿ ಹಾರವನ್ನು ಮಾಡಿಕೊಂಡು ಬರುತ್ತಿದ್ದೆ. ಅಂದಿನಿಂದಲೂ ಪುನೀತ್ ರಾಜ್ಕುಮಾರ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಎಲ್ಲರೂ ನನಗೆ ಪರಿಚಯವಿದ್ದಾರೆ ಎಂದರು.
ಎರಡು ಕಡ್ಲೆಪುರಿ ಹಾರವನ್ನು ತಯಾರಿಸಿದ್ದು, ಒಂದನ್ನು ಸಮಾಧಿ ಬಳಿಗೆ ತೆಗೆದುಕೊಂಡು ಬಂದಿದ್ದೇನೆ ಮತ್ತೊಂದು ಗುಬ್ಬಿಯಲ್ಲಿ ರಿಲೀಸ್ ಆಗುತ್ತಿರುವ ಪುನೀತ್ ಜೇಮ್ಸ್ ಸಿನಿಮಾದ ಪೋಸ್ಟರ್ಗೆ ಹಾಕಲು ಇಟ್ಟುಬಂದಿದ್ದೇನೆ. ದುಡ್ಡನ್ನು ಸಂಪಾದನೆ ಮಾಡಬಹುದು, ಆದರೆ ಪ್ರೀತಿಯನ್ನು ಸಂಪಾದನೆ ಮಾಡುವುದು ಬಹಳ ಕಷ್ಟವಿದೆ ಎಂದು ಹೇಳುತ್ತಾ ಭಾವುಕರಾದರು. ಇದನ್ನೂ ಓದಿ: ಕಲಾವಿದ ದೇವಿಕಿರಣ್ ಕೈಚಳಕದಲ್ಲಿ ಪವರ್ ಸ್ಟಾರ್ ಪುನೀತ್
ಇದೇ ವೇಳೆ ಅವರು ಬದುಕಿದ್ದಾಗ ಮನೆಗೆ ಕರೆದುಕೊಂಡು ಹೋಗಿ ಊಟ ನೀಡಿದ್ದರು. ಅಶ್ವಿನಿ ಅವರು ನನಗೆ ಎರಡು ಜೊತೆ ಸೀರೆ ಕೊಟ್ಟಿದ್ದಾರೆ ಎಂದು ನೆನೆದು ಕಣ್ಣೀರು ಹಾಕಿದರು. ನಂತರ ಸಮಾಧಿ ಬಳಿ ಶಿವರಾಜ್ಕುಮಾರ್ ಅವರು ಬರುವವರೆಗೂ ಕಾದು ನಂತರ ತೆರಳುತ್ತೇನೆ ಎಂದು ತಿಳಿಸಿದರು.