ಬಾಗಲಕೋಟೆ: ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ತಾನು ಕಲಿತ ಶಾಲೆ, ಹಾಗೂ ಬಾಲ್ಯದ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅದೇ ರೀತಿ ಅವರೆಲ್ಲ ದೊಡ್ಡವರಾಗಿ ಒಂದು ಕೆಲಸಕ್ಕೆ ಹತ್ತಿದಾಗ, ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು, ಅದು ಮುಂದಿನ ನಮ್ಮ ವಿದ್ಯಾರ್ಥಿ ಪೀಳಿಗೆಗೆ ಸಹಕಾರಿ ಆಗಬೇಕು ಎಂಬ ಹಂಬಲ ಇರುತ್ತದೆ.
ಅದೇ ರೀತಿ ಬಾಗಲಕೋಟೆ (Bagalkot) ಜಿಲ್ಲೆಯ ಇಳಕಲ್ ನಗರದ ಒಂದಿಷ್ಟು ಹಳೆಯ ವಿದ್ಯಾರ್ಥಿಗಳು (Alumni) ತಾವು ಕಲಿತ ಪ್ರೌಢಶಾಲೆಗೆ ಎನಾದರೂ ಕೊಡುಗೆ ನಿಡಬೇಕೆಂಬ ಹಂಬಲದಿಂದ, ತಾವು ಕಲಿತ ಶಾಲೆಗೆ ಒಂದು ವಿಭಿನ್ನ ಕೊಡುಗೆ ನೀಡುತ್ತಿದ್ದಾರೆ.
ಇಳಕಲ್ ನಗರದ ಸರ್ಕಾರಿ ಕಿರಿಯ ಪದವಿ ಪೂರ್ವ ಕಾಲೇಜು (Government Junior PU College) ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯ, 2007-2008ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿ ಬಳಗದವರು ಸದ್ದಿಲ್ಲದೇ ತಾವು ಕಲಿತ ಶಾಲೆಗೆ ಸುಣ್ಣ ಬಣ್ಣ ಹಚ್ಚುವ ಮೂಲಕ ಶಾಲೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಹೊಣೆಹೊತ್ತಿದ್ದಾರೆ.
ಗೆಳೆಯರೆಲ್ಲ ಸೇರಿ ತಮ್ಮ ಕೈಲಾದಷ್ಟು ದುಡ್ಡು ಹಾಕಿ, ತಾವೇ ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಗೆ ಬಣ್ಣ ಬಳಿಯುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೇ ಹಳೆಯದಾದ ಶಾಲೆಯ ಬೋರ್ಡ್ಗೆ ಹೊಸ ರೂಪ ಕೊಟ್ಟಿದ್ದಾರೆ. ಇನ್ನು ಮಕ್ಕಳಿಗೆ ಮೂಲ ಭೂತವಾಗಿರಬೇಕಾದ ಶೌಚಾಲಯವನ್ನು ಸುಸಜ್ಜಿತವಾಗಿ ರಿಪೇರಿ ಮಾಡಿಸುತ್ತಿದ್ದಾರೆ.
ಇನ್ನು ಶಾಲಾ ಆವರಣದ ಕ್ಲೀನಿಂಗ್, ಪ್ರಾರ್ಥನೆ ಹಾಗೂ ಕಾರ್ಯಕ್ರಮ ಮಾಡಲು ಬೇಕಾದ ಪ್ರಾರ್ಥನಾ ಕಟ್ಟೆ (ಪ್ರೇಯರ್ ಸ್ಟೇಜ್) ಮರು ನಿರ್ಮಾಣ ಮಾಡಿಕೊಡಲು, ಪ್ರಾರ್ಥನಾ ಕಟ್ಟೆಗೆ ಕಲ್ಲು, ಸಿಮೆಂಟ್ ಹಾಕುವ ಮೂಲಕ ಪ್ರಾರ್ಥನಾ ಕಟ್ಟೆಯನ್ನು ರೆಡಿ ಮಾಡಿಸಿ ಕೊಡುವ ವಿಶಿಷ್ಟ ಕಾರ್ಯಕ್ಕೆ ಕೈ ಹಾಕಿದ್ದಾರೆ. ಹಳೆಯ ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಸದ್ಯ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಟೊಮೆಟೋ ಬಳಿಕ ಬಾಳೆಹಣ್ಣಿಗೆ ಬಂಗಾರದ ಬೆಲೆ- 1 ಕೆಜಿ ಏಲಕ್ಕಿ ಬಾಳೆ 80 ರೂ.ಗೆ ಮಾರಾಟ
ಈ ಸರ್ಕಾರಿ ಪ್ರೌಢಶಾಲೆಯ ಬಗ್ಗೆ ಹೇಳುವುದಾದರೇ, ಇದು 1936ರಲ್ಲಿ ಒಂದು ಸಣ್ಣ ಕೋಣೆಯಲ್ಲಿ ಆರಂಭವಾಗಿತ್ತು. ನಂತರ 1948ರಲ್ಲಿ ಮುಂಬೈ ಸರ್ಕಾರದಲ್ಲಿ ಗೃಹ ಮಂತ್ರಿಗಳಾಗಿದ್ದ ಮುರಾರ್ಜಿ ದೇಸಾಯಿ ಅವರು ಈ ಶಾಲೆಗೆ ಅಡಿಗಲ್ಲು ಹಾಕಿದರು. ಅವಸಾನದ ಹಂತ ತಲುಪುತ್ತಿರುವ ಈ ಶತಮಾನದಂಚಿನಲ್ಲಿರುವ ಶಾಲೆಯನ್ನು ನೋಡಿದ ಹಳೆಯ ವಿದ್ಯಾರ್ಥಿಗಳು, ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯ ಅಂದ ಚೆಂದ ಹೆಚ್ಚಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಹಳೆಯ ವಿದ್ಯಾರ್ಥಿಗಳ ಈ ಸಮಾಜಿಕ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ನಡೆಯುತ್ತೆ ಪ್ರೇತಾತ್ಮಗಳ ವಿವಾಹ- ಮೃತಪಟ್ಟವರ ಆಸೆ ಈಡೇರಿಸೋ ವಿಶಿಷ್ಠ ಆಚರಣೆ
Web Stories