ಬಾಗಲಕೋಟೆ: ಮಲಪ್ರಭೆಯ ಅಬ್ಬರಕ್ಕೆ ಬಾಗಲಕೋಟೆ ಜಿಲ್ಲೆಯ ಜನರ ಬದುಕು ಕೊಚ್ಚಿ ಹೋಗಿದೆ. ಅದೆಷ್ಟೋ ಜಾನುವಾರುಗಳು ಸತ್ತು ಬಿದ್ದಿವೆ. ಆದರೆ ಬಾದಾಮಿ ತಾಲೂಕಿನ ಕೇಡಾ ಗ್ರಾಮದ ನಿವಾಸಿಯ ವೃದ್ಧನ ಬದುಕೇ ಭೀಕರ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.
75ರ ವೃದ್ಧ ಹನುಮಂತಪ್ಪ ತಮ್ಮ ಎಮ್ಮೆ ಸಾವಿಗೆ ಕಣ್ಣೀರಿಟ್ಟಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಎಮ್ಮೆ ಪ್ರವಾಹದ ರಭಸಕ್ಕೆ ಸಿಲುಕಿ ಸತ್ತಿದೆ. ಬದುಕು ಕಟ್ಟಿಕೊಟ್ಟ ಮೃತಪಟ್ಟ ಎಮ್ಮೆಯನ್ನು ಹೊಳೆಯಿಂದ ತಂದು, ಹೂಳಲು ಎತ್ತಿನಗಾಡಿಯಲ್ಲಿ ಸಾಗಿಸುವ ದೃಶ್ಯ ಮನಕಲುಕುವಂತಿದೆ.
25 ವರ್ಷಗಳಿಂದ ಜೀವನಕ್ಕೆ ಹೆಗಲಾಗಿದ್ದ ಎಮ್ಮೆಯನ್ನು ಹೂಳಲು ರಸ್ತೆಯುದ್ದಕ್ಕೂ ಎತ್ತಿನಗಾಡಿಯಲ್ಲಿ ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ. ದಾರಿಯುದ್ದಕ್ಕೂ ಜೀವನ ಮಾಡಲು ಬೆನ್ನೆಲುಬಾಗಿದ್ದ ಎಮ್ಮೆಯನ್ನು ನೆನೆದು ಪಬ್ಲಿಕ್ ಟಿವಿ ಜೊತೆ ವೃದ್ಧ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಈ ಎಮ್ಮೆಯಿಂದ ಮಕ್ಕಳು, ಮೊಮ್ಮಕ್ಕಳನ್ನು ಸಾಕಿದ್ದೆ. ಈಗ ಇದು ಪ್ರವಾಹದ ಸುಳಿಗೆ ಸಿಕ್ಕಿ ಹೋಗಿದೆ. ನನ್ನ ಬದುಕು ಈಗ ಬೀದಿ ಪಾಲಾಯಿತು. ಈಗ ನಾವು ಬದುಕಿವುದಕ್ಕಿಂತ ಸಾಯುವುದೇ ಮೇಲು ಎಂದು ಹನುಮಂತಪ್ಪ ನೋವನ್ನು ತೊಡಿಕೊಂಡಿದ್ದಾರೆ.