ಚಿಕ್ಕಬಳ್ಳಾಪುರ: ಎಂತಹವರಿಗೂ ಸಾವು ಎಂದಾಕ್ಷಣ ಆವರಿಸೋದೆ ಭಯ. ಆದ್ರೆ ಈ ದಂಪತಿ ಸಾಯೋಕು ಮುನ್ನವೇ ಮನೆಯಲ್ಲೇ ಸಮಾಧಿ ರೆಡಿ ಮಾಡಿಕೊಂಡು ಸಾವಿಗಾಗಿ ಕಾಯುತ್ತಿದ್ದಾರೆ.
ಹೌದು. ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಬಂಡಹಳ್ಳಿ ಗ್ರಾಮದಲ್ಲಿರುವ ವೆಂಕಟರೆಡ್ಡಿ ರಾಯಲು ಹಾಗೂ ಜಯಮ್ಮ ದಂಪತಿಯೇ ಇಂತಹ ವಿಚಿತ್ರ ಸಾಹಸಕ್ಕೆ ಮುಂದಾಗಿದ್ದಾರೆ. ಈ ದಂಪತಿ ತಾವು ಸಾಯೋಕು ಮುನ್ನವೇ ತಮ್ಮದೇ ಮನೆಯಲ್ಲೇ ಸಮಾಧಿಯನ್ನ ರೆಡಿ ಮಾಡಿಕೊಂಡಿದ್ದಾರೆ. ಮನೆಯ ಮಧ್ಯಭಾಗದಲ್ಲೇ ಕಲ್ಲು ಚಪ್ಪಡಿಗಳ ಮೂಲಕ ತಮ್ಮ ಸಮಾಧಿಗಳನ್ನ ತಾವೇ ನಿರ್ಮಾಣ ಮಾಡಿ ಕಟ್ಟಿಕೊಂಡಿದ್ದಾರೆ.
ವೆಂಕಟರೆಡ್ಡಿ ರಾಯಲು ಅವರಿಗೆ 88 ವರ್ಷ ವಯಸ್ಸು. ಇವರ ಪತ್ನಿ ಜಯಮ್ಮಗೆ ಸರಿ ಸುಮಾರು 80 ವರ್ಷಗಳಾಗಿವೆ. ವೆಂಕಟರೆಡ್ಡಿ ರಾಯಲು ಅವರನ್ನ ಯಾಕೆ ಈ ತರ ಅಂತ ಕೇಳಿದರೆ ವೇದಗಳ ಮೂಲಕ ಆತ್ಮದ ರಹಸ್ಯ ತಿಳಿದು ಹೀಗೆ ಮಾಡುತ್ತಿದ್ದೇವೆ ಅಂತ ಹೇಳಿದ್ದಾರೆ.
ಇನ್ನೂ ಇವರ ಸಾವು 2020 ರಲ್ಲಿ ಸಂಭವಿಸುತ್ತಂತೆ. ಸಾಯೋಕೆ ಒಂದು ತಿಂಗಳ ಮುಂಚೆಯೇ ಸಾವು ಹೇಗೆ ಬರುತ್ತೆ ಅನ್ನೋದು ಕೂಡ ಇವರಿಗೆ ತಿಳಿಯುತ್ತಂತೆ. ಹೀಗಾಗಿ ಸಮಾಧಿಯನ್ನ ಎರಡು ಭಾಗಗಳಾಗಿ ಮಾಡಿಕೊಂಡಿದ್ದು ಸಾಯೋಕು ಒಂದು ತಿಂಗಳ ಮುಂಚೆಯೇ ಅನ್ನ-ಆಹಾರ ತ್ಯಜಿಸಿ ಮೊದಲನೇ ಭಾಗದ ಸಮಾಧಿಯಲ್ಲಿ ಜೀವಂತವಾಗಿ ಸಮಾಧಿಯಾಗುತ್ತೇವೆ ಎಂದು ಹೇಳುತ್ತಾರೆ.
ಪತ್ನಿ ಸತ್ತ ಅದೇ ತಿಂಗಳಲ್ಲಿ ನಾನು ಕೂಡ ಸಾಯುತ್ತೇನೆ. ಹಾಗೆ ಪ್ರತಿದಿನ ಇದೇ ಸಮಾಧಿಯಲ್ಲಿ ಕುಳಿತು ಧ್ಯಾನ ಪೂಜೆ ಕೂಡ ಮಾಡುತ್ತಿದ್ದೇವೆ ಎಂದು ವೆಂಕಟರೆಡ್ಡಿ ರಾಯಲು ತಿಳಿಸಿದ್ದಾರೆ.
ಈ ದಂಪತಿ ಮನೆಯಲ್ಲಿಯೇ ಶಿವಲಿಂಗ ಪ್ರತಿಷ್ಟಾಪಿಸಿದ್ದು, ಮನೆಯನ್ನ ಶಿವನ ದೇವಾಲಯನ್ನಾಗಿ ಮಾಡಿಕೊಂಡಿದ್ದಾರೆ. ಬದುಕಿನ ಬಂಡಿಗೆ ಅಂತ ಹಸುವಿನ ಸಾಕಾಣಿಕೆ ಸೇರಿದಂತೆ ಕೃಷಿಕಾಯಕವನ್ನು ಮಾಡುತ್ತಾರೆ.
ಈ ದಂಪತಿಗೆ 3 ಜನ ಹೆಣ್ಣು ಮಕ್ಕಳು 2 ಗಂಡು ಮಕ್ಕಳು ಇದ್ದು ಎಲ್ಲರು ಮದುವೆಯಾಗಿ ಬೇರೆ ಬೇರೆ ಮನೆಗಳಲ್ಲಿ ವಾಸವಾಗಿದ್ದಾರೆ. ಒಟ್ಟಿನಲ್ಲಿ ಇಂತಹ ತಂತ್ರಜ್ಞಾನ ಯುಗದಲ್ಲೂ ಸಾಯೋಕು ಮುನ್ನವೇ ಸಮಾಧಿ ಮಾಡಿಕೊಂಡಿರೋ ಇವರಿಗೆ ಮೌಢ್ಯ ಅನ್ನಬೇಕೋ ಅಥವಾ ಹುಚ್ಚಾಟ ಅನ್ನಬೇಕೋ ಇವರು ನಂಬಿರೋ ಆ ದೇವರೇ ಬಲ್ಲ.