ಕೋಲಾರ: ಹೊಸದಾಗಿ ಕೊರೆಯುತ್ತಿರುವ ಕೊಳವೆ ಬಾವಿಯಿಂದ ತೈಲ ಮಿಶ್ರಿತ ಕೊಳಕು ನೀರು ಹೊರ ಚಿಮ್ಮುತ್ತಿರುವ ವಿಚಿತ್ರ ಘಟನೆ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ.
ಮಾಲೂರಿನ ಗ್ರೀನ್ ಸಿಟಿ ಶಾಲೆ ಆವರಣದಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗುತ್ತಿದ್ದು, ಕೊಳವೆ ಬಾವಿ ಕೊರೆಯುವ ಯಂತ್ರ 1,300 ಅಡಿ ಆಳ ತಲುಪುತ್ತಿದ್ದಂತೆ ಒಳಗಿನಿಂದ ತೈಲ ಮಿಶ್ರಿತ ಕೊಳಕು ನೀರು ಹೊರಬರಲು ಆರಂಭವಾಗಿದೆ. ಸಾಮಾನ್ಯವಾಗಿ ಕೊಳವೆ ಬಾವಿ ಕೊರೆದರೆ ಮಣ್ಣು ಮಿಶ್ರಿತ ನೀರು ಹೊರಬರುತ್ತದೆ. ಆದರೆ ಗ್ರೀನ್ ಸಿಟಿ ಶಾಲಾ ಆವರಣದಲ್ಲಿ ಕೊರೆದ ಕೊಳವೆ ಬಾವಿಯಿಂದ ತೈಲ ಮಿಶ್ರಿತ ಕೊಳಕು ನೀರು ಹೊರಚಿಮ್ಮುತ್ತಿದೆ. ಇದನ್ನು ಕಂಡು ಶಾಲಾ ಆಡಳಿತ ಮಂಡಳಿ ಹಾಗೂ ಸ್ಥಳೀಯರು ದಂಗಾಗಿದ್ದಾರೆ.
ಶಾಲೆ ಮಕ್ಕಳಿಗೆ ಕುಡಿಯುವ ನೀರಿಗಾಗಿ ಆಡಳಿತ ಮಂಡಳಿ ಕೊಳವೆ ಬಾವಿ ಕೊರೆಸುತ್ತಿತ್ತು. ಆದರೆ ತೈಲ ಮಿಶ್ರಿತ ನೀರು ಹೊರಬಂದ ಹಿನ್ನೆಲೆ ಕೊಳವೆ ಬಾವಿ ಕೊರೆಯುವುದನ್ನು ನಿಲ್ಲಿಸಲಾಗಿದೆ. ಸದ್ಯ ಸ್ಥಳಕ್ಕೆ ಹಿರಿಯ ಭೂ ವಿಜ್ಞಾನಿಗಳು ಹಾಗೂ ಅಂತರ್ಜಲ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.