ಗದಗ: ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.
ಜಿಲ್ಲಾಧಿಕಾರಿ ಎಂಜಿ ಹಿರೇಮಠ್ ನೇತೃತ್ವದಲ್ಲಿ ಗದಗ ಜಿಲ್ಲೆಯ ಡಂಬಳ ಗ್ರಾಮದಲ್ಲಿ ಜನಸ್ಪಂದನಾ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಡೀ ಜಿಲ್ಲಾಡಳಿತದ ಅಧಿಕಾರಿಗಳು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಡೀ ಜಿಲ್ಲಾಡಳಿತವೇ ತಮ್ಮ ಗ್ರಾಮಕ್ಕೆ ಬರುವುದರಿಂದ ನಮ್ಮ ಸಮಸ್ಯೆಗಳು ಇಲ್ಲಿಗೆ ಮುಗಿಯಲಿವೆ ಅಂತ ಅಲ್ಲಿನ ಜನರು ನಂಬಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಗ್ರಾಮ ವಾಸ್ತವ್ಯದ ನೆಪದಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಬದಲು ಪ್ರವಾಸಿ ಮಂದಿರಕ್ಕೆ ದೌಡಾಯಿಸಿದ್ದಾರೆ.
ಪ್ರವಾಸಿ ಮಂದಿರದ ಎ.ಸಿ ರೂಂನಲ್ಲೇ ವಾಸ್ತವ್ಯ ಹೂಡಿ, ಮೃಷ್ಟಾನ್ನ ಭೋಜನ ಸವಿದರು. ಡಿಸಿ ಎಂ.ಜಿ ಹಿರೇಮಠ್ ನೇತೃತ್ವದ ಅಧಿಕಾರಿಗಳು ಉತ್ತರ ಕರ್ನಾಟಕದ ಭಾರೀ ಭೋಜನ ಮಾಡಿ, ಬಾಳೆ ಹಣ್ಣು, ಸೇಬುಗಳನ್ನ ಜೇಬಿಗಿಳಿಸಿ ತಿಂದು ತೇಗಿ ಎಸಿ ರೂಮ್ ನಲ್ಲಿ ಹಾಯಾಗಿ ಮಲಗಿದ್ದಾರೆ. ಡಿಸಿ ಎಂ.ಜಿ ಹಿರೇಮಠ್, ಜಿಲ್ಲಾ ಪಂಚಾಯತ್ ಸಿಇಒ ಮಂಜುನಾಥ್ ಚವ್ಹಾಣ, ಅಪರ ಡಿಸಿ ಶಿವಾನಂದ, ಎಸಿ ಮಂಜುನಾಥ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ಗ್ರಾಮ ವಾಸ್ತವ್ಯದಲ್ಲಿ ಭಾಗಿಯಾಗಿದ್ದರು.
ಎಲ್ಲ ಅಧಿಕಾರಿಗಳಿಗೆ ಹೈಫ್ ಕಾಟ್, ಬೆಡ್ಶಿಟ್, ತಲೆದಿಂಬು, ಬ್ಲಾಂಕೆಟ್ ವ್ಯವಸ್ಥೆ ಮಾಡಲಾಗಿತ್ತು. ಇದು ಗದಗ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯದ ಅಸಲಿ ಕಥೆ ಆಗಿದೆ. ಇನ್ನು ಈ ಕುರಿತು ಡಿಸಿ ಅವರನ್ನು ಕೇಳಿದರೆ 52 ಅರ್ಜಿಗಳು ಬಂದಿದ್ದು, ಕೆಲ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಕೆಲ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv