Bengaluru City
ನಂದಾದೀಪ ಆರಿದ ವದಂತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಸ್ಪಷ್ಟೀಕರಣ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಂದಾದೀಪ ಆರಿದ್ದು, ಕಂಟಕ ಎದುರಾಗಿದೆ ಎಂಬ ವೈರಲ್ ಪೋಸ್ಟ್ ಗೆ ಇದೀಗ ದರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸ್ಪಷ್ಟನೆ ನೀಡಿದ್ದಾರೆ.
ಸ್ಪಷ್ಟನೆ ಏನು..?
ಸಾಮಾಜಿಕ ಜಾಲತಾಣ ಮತ್ತು ಟಿವಿ ಮಾಧ್ಯಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ದೇವರ ನಂದಾದೀಪ ನಂದಿ ಹೋಗಿದೆ ಎಂಬ ಅಪಪ್ರಚಾರದ ಮಾತುಗಳು ಹರಡುತ್ತಿವೆ. ಪ್ರಪ್ರಥಮವಾಗಿ ಈ ವದಂತಿಗೆ ಯಾರೂ ಕಿವಿಗೊಡಬೇಡಿ.
ಶ್ರೀ ಮುಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿ 8 ಗಂಟೆಗೆ ಬಾಗಿಲನ್ನು ಹಾಕಲಾಗುತ್ತದೆ. ಮರುದಿನ ಮುಂಜಾನೆ 5 ಗಂಟೆಗೆ ಬಾಗಿಲನ್ನು ತೆಗೆಯುತ್ತಾರೆ. ಮಧ್ಯದಲ್ಲಿ ಯಾರೊಬ್ಬರಿಗೂ ಪ್ರವೇಶಿಸುವ ಅವಕಾಶವಿರುವುದಿಲ್ಲ. ನಂತರ ದೇವಸ್ಥಾನವನ್ನು ಪ್ರವೇಶಿಸಿದವರು ಯಾರು? ಅಲ್ಲಿ ನಂದಾದೀಪ ನಂದಿಹೋಗಿದೆ ಎಂಬುದಾಗಿ ನೋಡಿದವರು ಯಾರು? ಇದು ಶ್ರೀ ಕ್ಷೇತ್ರದ ಭಕ್ತಾದಿಗಳ ಭಾವನೆ ಮತ್ತು ನಂಬಿಕೆಗಳೊಂದಿಗೆ ಕೆಲವು ಕಿಡಿಗೇಡಿಗಳು ಮಾಡಿರುವ ಸುಳ್ಳು ವದಂತಿಯಾಗಿದೆ.
ಈ ವದಂತಿಯಿಂದ ನೀವೆಲ್ಲರೂ ದೂರ ಇದ್ದು ಲೋಕಕ್ಕೆ ಬಂದಿರುವ ಕೊರೊನಾ ಎಂಬ ಮಾಹಾಮಾರಿಯನ್ನು ಮನುಜ ಕುಲದಿಂದ ದೂರ ಇಡಲು ಎಲ್ಲರೂ ಅವರವರ ಮನೆಯ ಒಳಗಡೆಯೇ ಇದ್ದು ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿಕೊಳ್ಳಿ.
ಇದು ಕೂಡ ಭಗವಂತನ ಸಾನಿಧ್ಯಕ್ಕೆ ಮಾಡುತ್ತಿರುವ ನಿಂದಾಸ್ತುತಿಯಾಗಿರಬಹುದು. ಇನ್ನು ಮುಂದೆ ಮಾಧ್ಯಮದವರು ಈ ವಿಚಾರವನ್ನು ಪ್ರಕಟಿಸುವ ಮೊದಲುಯ ನಮ್ಮನ್ನು ವಿಚಾರಿಸದೆ ಪ್ರಕಟಿಸದಿದ್ದರೆ ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ. ಇದನ್ನೂ ಓದಿ: ಧರ್ಮಸ್ಥಳದ ನಂದಾದೀಪ ಆರಿದ ವದಂತಿ- ಭಯಬಿದ್ದು ರಾತ್ರೋರಾತ್ರಿ ಮನೆ ಸಾರಿಸಿ ಹಣತೆ ಹಚ್ಚಿದ್ರು ಜನ!
ವೈರಲ್ ಆಗಿದ್ದು ಏನು?
ಶ್ರೀಕ್ಷೇತ್ರ ಧರ್ಮಸ್ಥದಲ್ಲಿ ನಂದಾ ದೀಪ ಆರಿದ್ದು, ಮಂಜುನಾಥನ ಭಕ್ತರು ತಮ್ಮ ಮನೆಯ ಮುಂದೆ ಒಂದು ದೀಪವನ್ನು ಹಚ್ಚುವ ಮೂಲಕ ಮಂಜುನಾಥ ಸ್ವಾಮಿಗೆ ಪಾತ್ರರಾಗಿ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವೈರಲ್ ಪೋಸ್ಟ್ ಗೆ ಬೆದರಿದ ರಾಜ್ಯದ ದಾವಣಗೆರೆ, ಚಿಕ್ಕಬಳ್ಳಾಪುರ, ಹಾವೇರಿ, ಚಿತ್ರದುರ್ಗಮೊದಲಾದ ಕಡೆಗಳಲ್ಲಿ ಭಕ್ತರು ಮಧ್ಯರಾತ್ರಿ ಎದ್ದು ದೀಪ ಹಚ್ಚಿದ ಪ್ರಸಂಗ ನಡೆದಿತ್ತು.
