ತುಮಕೂರು: ಸೈನಿಕನೋರ್ವನ ಮನೆಗೆ ಗ್ರಾಮ ಪಂಚಾಯತಿಯವರು ಕುಡಿಯುವ ನೀರಿನ ಸಂಪರ್ಕ ನೀಡದೇ ದೌರ್ಜನ್ಯ ನೀಡುತ್ತಿರುವ ಪ್ರಕರಣ ತುಮಕೂರು ಜಿಲ್ಲೆ ಪಾವಗಡದಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.
ಕೋಣನಕುರಿಕೆ ಗ್ರಾಮದ ಗಿರಿಯಪ್ಪ ಹಾಗೂ ನಾಗಮ್ಮ ದಂಪತಿ ಮಗ ವೆಂಕಟೇಶ್ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಊರಲಿದ್ದ ಸೈನಿಕನ ತಂದೆ ತಾಯಿಗೆ ಗುಜ್ಜನಡು ಗ್ರಾಮ ಪಂಚಾಯತಿಯಿಂದ ನೀರಿನ ಸಂಪರ್ಕ ನೀಡದೆ ತೊಂದರೆ ನೀಡುತಿದ್ದಾರೆ.
ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಿಲ್ಲ ಎನ್ನುವ ಕಾರಣಕ್ಕೆ ನೀರಿನ ಸಂಪರ್ಕ ನೀಡುತ್ತಿಲ್ಲ ಎಂದು ಗಿರಿಯಪ್ಪ ಆರೋಪಿಸಿದ್ದಾರೆ. ಪರಿಣಾಮ ಕಳೆದ ಐದಾರು ತಿಂಗಳಿನಿಂದ ದೂರದಿಂದ ನೀರು ಹೊತ್ತು ತಂದು ಜೀವನ ನಡೆಸುತ್ತಿದ್ದಾರೆ.
ನನ್ನ ಸಮಸ್ಯೆಯನ್ನು ಸಾಕಷ್ಟು ಬಾರಿ ಹೇಳಿದರೂ ಗ್ರಾಮ ಪಂಚಾಯತ್ ಸದಸ್ಯರು ಕೇಳುತ್ತಲೇ ಇಲ್ಲ ಎಂದು ಗಿರಿಯಪ್ಪ ತಿಳಿಸಿದ್ದಾರೆ.