ಬೆಂಗಳೂರು: ವಿದೇಶಿಗರನ್ನು ಗ್ರಾಮದ ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ವಿದೇಶದಿಂದ ಬರುವ ಭಾರತ ಮೂಲದ ಜನರನ್ನು ಕ್ವಾರಂಟೈನ್ ಮಾಡಲು ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ಸೂಚನೆಯಂತೆ ಬೆಂಗಳೂರು ಹೊರವಲಯದ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಹೋಬಳಿಯ ನರಸಾಪುರ ಹಾಗೂ ಬಾಣವಾಡಿ ಗ್ರಾಮಗಳಲ್ಲಿ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕ್ವಾರಂಟೈನ್ ಕೇಂದ್ರ ಸಿದ್ಧತೆ ಮಾಡಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ನಮ್ಮ ಗ್ರಾಮಗಳಲ್ಲಿ ಮಕ್ಕಳಿದ್ದಾರೆ. ಸ್ವಾಮಿ ನಾವು ಹಳ್ಳಿ ಜನರು ಯಾಕೆ ಇಲ್ಲಿ ಕ್ವಾಂರಟೈನ್ ಹೋಮ್ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಗೆ ಇನ್ನೂ ಕೊರೊನಾ ಕಾಲಿಟ್ಟಿಲ್ಲ, ಹೀಗೆ ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡಿದರೆ ಇಲ್ಲಿಗೂ ಮಹಾಮಾರಿ ವ್ಯಾಪಿಸುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ಜನರ ಮನವಿ ಮಾಡಿದ್ದು, ವಿದೇಶಿ ಜನರ ಕ್ವಾರಂಟೈನ್ಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹಳ್ಳಿಗಾಡಿನ ಜನರ ವಿರೋಧ ಮಾಡುತ್ತಿದ್ದಾರೆ. ಅಲ್ಲದೆ ಹೀಗೆ ಮಾಡುವುದರಿಂದ ಹಳ್ಳಿ ಹಳ್ಳಿಗೆ ಕರೊನಾ ವ್ಯಾಪಿಸುತ್ತದೆ ಎಂದು ವಿರೋಧಿಸುತ್ತಿದ್ದಾರೆ.