ಡೆಹ್ರಾಡೂನ್(ಉತ್ತರಾಖಂಡ್): ಜಮ್ಮು- ಕಾಶ್ಮೀರದ ರಜೌರಿಯಲ್ಲಿ ಶನಿವಾರ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಗೊಂಡು ಮೇಜರ್ ಚಿತ್ರೇಶ್ ಬಿಸ್ತ್ ಹುತಾತ್ಮರಾಗಿದ್ದು, ಇಂದು ಅವರಿಗೆ ಹರಿದ್ವಾರದಲ್ಲಿ ಅಂತಿಮ ನಮನ ಸಲ್ಲಿಸಲಾಗುತ್ತಿದೆ.
ಒಂದೆಡೆ ಪುಲ್ವಾಮಾದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ಮಾಡುತ್ತಿದೆ. ಇನ್ನೊಂದೆಡೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಅಂತಿಮ ಯಾನ ನಡೆಯುತ್ತಿದೆ. ಬಿಸ್ತ್ ಅವರಿಗೆ ಅಂತಿಮ ನಮನ ಸಲ್ಲಿಸಲು ಹರಿದ್ವಾರದಲ್ಲಿ ಜನಸಾಗರವೇ ಹರಿದು ಬರುತ್ತಿದ್ದು, `ಅಮರ್ ರಹೇ’ `ಅಮರ್ ರಹೇ’ ಎಂಬ ಘೋಷಣೆ ಕೂಗುತ್ತಿದ್ದಾರೆ. ಸಾವಿರಾರು ಜನ ಅಂತಿಮ ದರ್ಶನ ಪಡೆಯಲು ಬರುತ್ತಿದ್ದು, ಇನ್ನು ಹಲವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತು ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
ಹುತಾತ್ಮರಾಗಿದ್ದು ಹೇಗೆ?
ಪುಲ್ವಾಮಾ ದಾಳಿ ನಡೆದು 40 ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ಬಳಿ ನೆಲದ ಒಳಗಡೆ ಉಗ್ರರು ಹುದುಗಿಸಿಟ್ಟಿದ್ದ ಐಇಡಿ ಸ್ಫೋಟಗೊಂಡು ಸೇನೆಯ ಅಧಿಕಾರಿ ಚಿತ್ರೇಶ್ ಹುತಾತ್ಮರಾಗಿದ್ದರು. ಶನಿವಾರ ಸಂಜೆ 3 ಗಂಟೆಯ ವೇಳೆಗೆ ನಡೆದ ಈ ಘಟನೆಯಲ್ಲಿ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗಡಿ ನಿಯಂತ್ರಣ ರೇಖೆಯ ಬಳಿಯಿಂದ 1.5 ಕಿ.ಮೀ ದೂರದಲ್ಲಿ ಐಇಡಿಯನ್ನು ಇಡಲಾಗಿತ್ತು. ಗಡಿ ನಿಯಂತ್ರಣ ರೇಖೆಯ ಬಳಿ ಸೇನೆಯ ಅಧಿಕಾರಿಗಳು ಗಸ್ತು ತಿರುಗುವ ವೇಳೆ ಮಣ್ಣಿನಲ್ಲಿ ಹೂತ್ತಿದ್ದ ವಸ್ತು ಪತ್ತೆಯಾಗಿದೆ. ಈ ವಸ್ತುವನ್ನು ಮಣ್ಣಿನಿಂದ ತೆಗೆಯುವಾಗ ಸ್ಫೋಟಗೊಂಡಿತ್ತು. ಇದನ್ನೂ ಓದಿ; ಮುಂದಿನ ತಿಂಗ್ಳು ನಿಶ್ಚಯವಾಗಿತ್ತು ಹುತಾತ್ಮರಾದ ಮೇಜರ್ ಮದ್ವೆ
ಮದುವೆ ಫಿಕ್ಸ್ ಆಗಿತ್ತು:
31 ವರ್ಷದ ಮೇಜರ್ ಬಿಸ್ತ್ ಅವರಿಗೆ ಮದುವೆ ನಿಗದಿಯಾಗಿದ್ದು, ಇದೇ ತಿಂಗಳು 28ರಂದು ಊರಿಗೆ ತೆರಳುವವರಿದ್ದರು. ಮಾರ್ಚ್ 7ರಂದು ಮದುವೆ ಫಿಕ್ಸ್ ಆಗಿತ್ತು. ಹೀಗಾಗಿ ಅವರು ಮದುವೆ ತಯಾರಿಯಲ್ಲಿದ್ದರು. ಆದ್ರೆ ಇದೀಗ ಮೇಜರ್ ಚಿತ್ರೇಶ್, ಫಿಯಾನ್ಸಿ, ಫೋಷಕರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಇವರ ತಂದೆ ನಿವೃತ್ತ ಪೊಲೀಸ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.
ಇಂದು ಭಾರತದಿಂದ ಪ್ರತಿಕಾರ:
ಆತ್ಮಾಹುತಿ ದಾಳಿ ನಡೆದ ಆವಂತಿಪೂರದಿಂದ ಕೇವಲ 10 ಕಿ.ಮೀ ದೂರದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು. ಭಾನುವಾರ ರಾತ್ರಿ 8.30ರ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಕಟ್ಟಡವೊಂದರಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಸೇನೆಗೆ ಸಿಕ್ಕಿದೆ. ಬಳಿಕ ಮಧ್ಯರಾತ್ರಿ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಆ ಕಟ್ಟಡವನ್ನು ಸೇನೆ ಸುತ್ತುವರಿದಿತ್ತು. 55 ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್, ಪೊಲೀಸ್ ಮತ್ತು ಸಿಆರ್ಪಿಎಫ್ ಒಳಗೊಂಡು ಭಾರತೀಯ ಸೇನೆ ಈ ಕಾರ್ಯಚರಣೆ ನಡೆಸಿ ಮೊದಲು ಉಗ್ರರಿಗೆ ಶರಣಾಗಲು ಸೂಚಿಸಿದ್ದರು. ಆದರೆ ಉಗ್ರರು ಶರಣಾಗುವ ಬದಲು ಯೋಧರಿಗೆ ಗುಂಡಿನ ದಾಳಿ ನಡೆಸಿದ್ದರು. ಇಂದು ಬೆಳಗ್ಗಿನ ಜಾವದವರೆಗೂ ನಿರಂತರವಾಗಿ ಭೀಕರ ಗುಂಡಿನ ಚಕಮಕಿ ನಡೆದಿದೆ. ಇದನ್ನೂ ಓದಿ: ಯೋಧರ ಬಲಿಗೆ ಕಾರಣನಾದ ಮಾಸ್ಟರ್ ಮೈಂಡ್ ಫಿನಿಶ್!
ಗುಂಡಿನ ಚಕಮಕಿ ವೇಳೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಆದರೂ ಎದೆಗುಂದದೆ ಯೋಧರು ಕಾರ್ಯಾಚರಣೆ ಮುಂದುವರಿಸಿ ಕಾರ್ಯಾಚರಣೆ ನಡೆಸಿ ಉಗ್ರರು ಅಡಗಿದ್ದ ಇಡೀ ಕಟ್ಟಡವನ್ನೇ ಉಡಾಯಿಸಿದ್ದಾರೆ. ಪರಿಣಾಮ ಸದ್ಯ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ರಕ್ತ ರಕ್ಕಸ ಅಬ್ದುಲ್ ರಶೀದ್ ಘಾಸಿ ಹಾಗೂ ಜೈಷ್ ಸಂಘಟನೆಯ ಮತ್ತೋರ್ವ ಕಮಾಂಡರ್ ಕಮ್ರಾನ್ನನ್ನು ಯೋಧರು ಹತ್ಯೆ ಮಾಡಿದ್ದಾರೆ. ಸುದೀರ್ಘ 9 ಗಂಟೆಗಳ ಗುಂಡಿನ ಚಕಮಕಿ ನಂತರ ಈ ಕಾರ್ಯಚರಣೆ ಯಶಸ್ವಿಯಾಗಿ ನಡೆದಿದೆ. ಇನ್ನೂ 6 ಮಂದಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಭಾರತೀಯ ಸೇನೆ ತನ್ನ ಕಾರ್ಯಾಚರಣೆ ಮುಂದುವರಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv