ಕಲಬುರಗಿ: ಈಶಾನ್ಯ ಸಾರಿಗೆ ಬಸ್ನ ಡೀಸೆಲ್ ಟ್ಯಾಂಕ್ಗೆ ಬಾಟಲ್ಗಳನ್ನೆ ಮುಚ್ಚಳಿಕೆ ಮಾಡಿರುವ ಕುರಿತು ಪಬ್ಲಿಕ್ ಟಿವಿ ಇತ್ತೀಚೆಗೆ ವರದಿ ಮಾಡಿತ್ತು. ವರದಿಯ ನಂತರ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಡಿಪೋ ಮ್ಯಾನೇಜರ್ ಹಾಗೂ ಸಾರಿಗೆ ಡಿಸಿಯನ್ನು ಅಮಾನತು ಮಾಡುವುದಾಗಿ ಹೇಳಿದ್ದರು. ಇದೀಗ ಯಾರೋ ಮಾಡಿದ್ದ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವಂತಾಗಿದೆ.
ಇದೀಗ ಅಲ್ಲಿನ ಅಧಿಕಾರಿಗಳು ಈ ಕುರಿತು ಮೇಲಾಧಿಕಾರಿ ಹಾಗೂ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಎಫ್ ಡಿಎ ನಾಗರೆಡ್ಡಿ ಅವರನ್ನೇ ಬಲಿಪಶು ಮಾಡಿದ್ದು, ಕರ್ತವ್ಯ ನಿರ್ಲಕ್ಷ್ಯ ಅಂತ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅಮಾಯಕ ಅಧಿಕಾರಿಯನ್ನು ಬಲಿಪಶು ಮಾಡಿದ್ದಾರೆ. ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ನಡೆಸುವುದಾಗಿ ಹೇಳಿದ್ದ ಸಚಿವ ತಮ್ಮಣ್ಣ ಇದೀಗ ಸೈಲೆಂಟಾಗಿದ್ದಾರೆ. ಈ ಮೂಲಕ ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತಾಗಿದೆ. ಇದನ್ನು ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್-ಡೀಸೆಲ್ ಟ್ಯಾಂಕ್ಗಳ ಮುಚ್ಚಳ ಇಲ್ಲದಿರುವ ಬಸ್ ಓಡಿಸಿದವರನ್ನು ಮನೆಗೆ ಕಳಸ್ತೀನಿ: ಡಿ.ಸಿ.ತಮ್ಮಣ್ಣ
ಈಶಾನ್ಯ ಸಾರಿಗೆಯ ಬಹುತೇಕ ಬಸ್ಗಳಲ್ಲಿ ಡೀಸೆಲ್ ಟ್ಯಾಂಕ್ಗಳನ್ನು ಮುಚ್ಚಲು 1 ಲೀ. ಮತ್ತು 2 ಲೀ. ಪ್ಲಾಸ್ಟಿಕ್ ಬಾಟಲ್ಗಳನ್ನು ಬಳಕೆ ಮಾಡಲಾಗುತ್ತಿತ್ತು. ಈ ಸಂಬಂಧ ಪಬ್ಲಿಕ್ ಟಿವಿ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಬೆನ್ನೆಲ್ಲೆ ಎಚ್ಚೆತ್ತ ಈಶಾನ್ಯ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್ ಗಳ ತಪಾಸಣೆ ನಡೆಸಿ, ಬಾಟಲ್ ತೆರವು ಮಾಡಿ ಟ್ಯಾಂಕ್ಗಳಿಗೆ ಕ್ಯಾಪ್ ಅಳವಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಇದನ್ನು ಓದಿ: ಈಶಾನ್ಯ ಸಾರಿಗೆ ಬಸ್ ಹತ್ತೋ ಮುನ್ನ ಹುಷಾರ್!
ಟ್ಯಾಂಕ್ಗಳಿಗೆ ಬಾಟಲ್ಗಳನ್ನು ಮುಚ್ಚಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಆದೇಶಿಸುತ್ತೇನೆ. ಡೀಸೆಲ್ ಟ್ಯಾಂಕ್ಗಳ ಮುಚ್ಚಳ ಇಲ್ಲದಿರುವ ಬಸ್ಗಳನ್ನು ಓಡಿಸಿರುವಂತಹ ಡಿಪೋ ಮ್ಯಾನೇಜರ್ ಸೇರಿದಂತೆ ಇತರೆ ಸಿಬ್ಬಂದಿಯನ್ನು ನಾಳೆಯೇ ಮನೆಗೆ ಕಳುಹಿಸುತ್ತೇನೆ. ಕೆಲವು ದಿನಗಳ ಹಿಂದೆಯೇ ಬೆಂಗಳೂರಿನಿಂದ ಕೆಲವು ಅಧಿಕಾರಿಗಳು ಈಶಾನ್ಯ ಸಾರಿಗೆಯ ವ್ಯವಸ್ಥೆಯ ಬಗೆಗೆ ವರದಿ ನೀಡುವಂತೆ ಕಳುಹಿಸಿದ್ದೇನೆ. ಪಬ್ಲಿಕ್ ಟಿವಿ ವರದಿ ನನ್ನ ಗಮನಕ್ಕೂ ಬಂದಿದ್ದೂ, ನಾಳೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡುತ್ತೇನೆ. ಪಬ್ಲಿಕ್ ಟಿವಿ ಈ ವರದಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ಪಬ್ಲಿಕ್ ಟಿವಿಗೆ ತಿಳಿಸಿದ್ದರು.
https://www.facebook.com/publictv/videos/1926995200670473/