ಭುವನೇಶ್ವರ: ಒಡಿಶಾದಲ್ಲಿ ಮುಂದಿನ ತಿಂಗಳು ಮೂರು ಹಂತದ ಪಂಚಾಯ್ತಿ ಚುನಾವಣೆ ನಡೆಯಲಿದೆ. ಇದಕ್ಕೂ ಮುಂಚಿತವಾಗಿ, ಕರಾವಳಿಯ ಭದ್ರಕ್ ಜಿಲ್ಲೆಯ ಒಂದು ಹಳ್ಳಿಯ ಮತದಾರರು ಚುನಾವಣೆಯ ಅಭ್ಯರ್ಥಿಗಳಿಗೆ ವಿಚಿತ್ರವಾದ ಬೇಡಿಕೆಯನ್ನು ಇಟ್ಟಿದ್ದಾರೆ. ಒಂದು ವೇಳೆ ಮಂಗಗಳನ್ನು ನಮ್ಮ ಗ್ರಾಮಗಳಿಂದ ಓಡಿಸದೆ ಹೋದರೆ ನಾವು ಮತದಾನವನ್ನೇ ಬಹಿಷ್ಕರಿಸುತ್ತೇವೆ ಎಂದು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ.
ಭದ್ರಕ್ ಜಿಲ್ಲೆಯ ತಲಪಾಡಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗೋಪಗಡಧರಪುರ ಗ್ರಾಮದಲ್ಲಿ ಕಳೆದ 2 ತಿಂಗಳಲ್ಲಿ ಮಂಗಗಳ ದಾಳಿಗೆ ಗ್ರಾಮದ ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಗ್ರಾಮಸ್ಥರು ಮುಂದಿನ ತಿಂಗಳು ನಡೆಯುವ ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ
ಈ ಮಂಗಗಳಿಂದ ಗ್ರಾಮದ ಜನ ತಮ್ಮ ದಿನನಿತ್ಯದ ಕೆಲಸಗಳನ್ನು ಮಾಡಲು ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ಈಗಾಗಲೇ ಈ ಮಂಗಗಳ ದಾಳಿಗೆ 30ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ತಿಹಿಡಿ ಪಂಚಾಯತ್ ಸಮಿತಿ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿರುವ ಜಿಲ್ಲಾ ಪರಿಷತ್ ಸದಸ್ಯ ಚಿಂತಾಮಣಿ ದಾಸ್ ಈ ಕುರಿತು ಮಾತನಾಡಿ, ಈ ಹಿಂದೆ ಮಂಗಗಳು ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುತ್ತಿತ್ತು. ಆದರೆ ಅವು ಕಳೆದ 2 ತಿಂಗಳಿಂದ ತುಂಬಾ ಹಿಂಸಾತ್ಮಕವಾಗಿ ವರ್ತಿಸುತ್ತಿವೆ. ಇತ್ತೀಚೆಗೆ ಮಧ್ಯವಯಸ್ಕ ಮಹಿಳೆಯೊಬ್ಬರು ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯ ಭುಜವನ್ನು ಮಂಗ ಕಚ್ಚಿದೆ. ಪರಿಣಾಮ ಆಕೆ ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿದ್ದಳು ಎಂದು ವಿವರಿಸಿದರು.
ತಿಹಿಡಿ ಪಂಚಾಯತ್ ಸಮಿತಿಯ ಮಾಜಿ ಸದಸ್ಯ ಹರಿಶ್ಚಂದ್ರ ಮಿಶ್ರಾ ಮಾತನಾಡಿ, ಮಂಗಗಳಿಂದ ಗ್ರಾಮಸ್ಥರು ರಸ್ತೆ ಮೇಲೆ ನಡೆದುಕೊಂಡು ಹೋಗುವುದೇ ಅಸಾಧ್ಯವಾಗಿದೆ. ಕೋವಿಡ್ ಕಾರಣದಿಂದ ಶಾಲೆಗಳನ್ನು ಮುಚ್ಚಿರುವುದು ನಮ್ಮ ಅದೃಷ್ಟ. ಆದ್ದರಿಂದ ಮಕ್ಕಳು ಸುರಕ್ಷಿತವಾಗಿದ್ದಾರೆ. ಇಲ್ಲವಾದಲ್ಲಿ ಮಕ್ಕಳ ಮೇಲೆಯೂ ಮಂಗಗಳು ಹೆಚ್ಚು ದಾಳಿ ಮಾಡುತ್ತಿದ್ದವು. ಕೋತಿಗಳ ಕಾಟ ಕೊನೆಗೊಂಡ ಬಳಿಕವೇ ನಾವು ಪಂಚಾಯತ್ ಚುನಾವಣೆಯಲ್ಲಿ ಮತ ಚಲಾಯಿಸುತ್ತೇವೆ ಎಂದು ಹೇಳಿದರು.
ಒಡಿಶಾದ ರಾಜ್ಯ ಗೀತೆ ‘ಬಂದೇ ಉತ್ಕಲ ಜನನಿ’ ಬರೆದ ಲಕ್ಷ್ಮೀಕಾಂತ ಮೊಹಪಾತ್ರ ಅವರ ಜನ್ಮಸ್ಥಳವಾದ ತಲಪಾಡಾ ಗ್ರಾಮದಲ್ಲಿ, ಅವರ ಮೊಮ್ಮಗ ಮತ್ತು ಸೊಸೆ ಕೂಡ ಮಂಗಗಳ ದಾಳಿಗೆ ಗುರಿಯಾಗಿದ್ದರು. ನಾವು ಬಾಗಿಲು ಮುಚ್ಚಲು ಮರೆತರೆ ಕೋತಿಗಳು ನಮ್ಮ ಅಡುಗೆ ಮನೆಯಿಂದ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತವೆ ಎಂದು ಕವಿಯ ಮೊಮ್ಮಗ ಬನಿಕಲ್ಯಾನ್ ಮಹಾಪಾತ್ರ ತಿಳಿಸಿದರು. ಇದನ್ನೂ ಓದಿ: ಪುರಸಭೆ ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ ಕಲಾವತಿ ಮೌನೇಶ ಬಡಿಗೇರ ದಿಢೀರ್ ರಾಜೀನಾಮೆ
ಭದ್ರಕ್ ವಿಭಾಗೀಯ ಅರಣ್ಯಾಧಿಕಾರಿ ಅಧೀರ್ ಬೆಹೆರಾ ಪ್ರತಿಕ್ರಿಯಿಸಿದ್ದು, ಕೋತಿಗಳನ್ನು ಹಿಡಿಯಲು ನಮ್ಮ ಇಲಾಖೆ ಗ್ರಾಮ ಪಂಚಾಯಿತಿಯಲ್ಲಿ ಬೋನುಗಳನ್ನು ಹಾಕಿದೆ. ಈ ಹಿಂದೆಯೂ ಬೇರೆ ಜಿಲ್ಲೆಗಳಲ್ಲಿ ಮಂಗಗಳನ್ನು ಓಡಿಸಲು ಹಲವಾರು ಪ್ರಯತ್ನಗಳು ನಡೆಸಿದ್ದೇವೆ. ಆದರೆ ಅವು ಯಶಸ್ವಿಯಾಗಲಿಲ್ಲ. ಇದಕ್ಕೆ ತುಂಬಾ ಪ್ರಯತ್ನ ಮಾಡಬೇಕು ಎಂದು ಹೇಳಿದರು.