ಭುವನೇಶ್ವರ್: ಕೊರಿಯರ್ ಕಂಪನಿಯೊಂದು ಕಳುಹಿಸಿದ್ದ ಪಾರ್ಸೆಲ್ ಬಾಕ್ಸ್ ನಲ್ಲಿ ನಾಗರ ಹಾವು ಕಾಣಿಸಿಕೊಂಡ ಘಟನೆ ಓಡಿಶಾದ ಮಯೂರ್ ಭಂಜ್ ಜಿಲ್ಲೆಯ ರಾಯರಂಗ್ನಲ್ಲಿ ನಡೆದಿದೆ.
ಮನೆಗೆ ಸಂಬಂಧಪಟ್ಟ ಲೇಖನಗಳು 15 ದಿನಗಳ ಹಿಂದೆ ಆಂಧ್ರ ಪ್ರದೇಶದ ವಿಜಯ್ವಾಡ ಮೂಲದ ಎಸ್ ಮುತ್ತುಕುಮಾರ್ ಖಾಸಗಿ ಕೊರಿಯರ್ ಎಜೆನ್ಸಿ ಮೂಲಕ ಬುಕ್ ಮಾಡಿದ್ದಾರೆ. ಈ ಪಾರ್ಸೆಲ್ ಭಾನುವಾರ ಮುತ್ತುಕುಮಾರ್ ಮನೆಗೆ ಬಂದಿದೆ.
ಈ ವೇಳೆ ಪಾರ್ಸೆಲ್ ಬಂದಿದೆ ಎಂದು ಮುತ್ತುಕುಮಾರ್ ಅವರು ತನ್ನ ಮಯೂರ್ ಭಂಜ್ನ ರಾಯರಾಂಗ್ನಲ್ಲಿ ಇರುವ ಮನೆಯಲ್ಲಿ ಓಪನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಒಂದು ಭಾಗವನ್ನು ತೆರೆದ ಮುತ್ತುಕುಮಾರ್ ಅವರಿಗೆ ಪಾರ್ಸೆಲ್ ಒಳಗೆ ನಾಗರಹಾವು ಕಂಡಿದೆ. ಪಾರ್ಸೆಲ್ನಲ್ಲಿ ಹಾವು ಕಂಡ ಮುತ್ತುಕುಮಾರ್ ಆಘಾತಕ್ಕೊಳಗಾಗಿದ್ದಾರೆ. ನಂತರ ತಕ್ಷಣ ಅರಣ್ಯ ಇಲಾಖೆಗೆ ಕೆರೆ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಮುತ್ತುಕುಮಾರ್ ನಾನು 15 ದಿನದ ಹಿಂದೆ ಈ ಪಾರ್ಸೆಲ್ ಬುಕ್ ಮಾಡಿದ್ದೆ. ಅದರಂತೆ ಆಗಸ್ಟ್ 9 ರಂದು ಗುಂಟೂರಿನ ಕೊರಿಯರ್ ಸಂಸ್ಥೆಯಿಂದ ಈ ಪಾರ್ಸೆಲ್ ಬಂದಿದೆ. ಆದರೆ ಓಡಿಶಾಗೆ ಬಂದ ನಂತರ ಈ ಹಾವು ಪಾರ್ಸೆಲ್ ಒಳಗೆ ಸೇರಿಕೊಂಡಿರಬಹುದು ಎಂದು ಹೇಳಿದ್ದಾರೆ.
ಅರಣ್ಯ ಅಧಿಕಾರಿ ಬಿಪಿನ್ ಚಂದ್ರ ಬೆಹೆರಾ ಪ್ರತಿಕ್ರಿಯಿಸಿ, ನಮಗೆ ಭಾನುವಾರ ಪಾರ್ಸೆಲ್ ಒಳಗೆ ನಾಗರಹಾವು ಇದೆ ಎಂದು ಕರೆ ಬಂತು. ನಾನು ತಕ್ಷಣ ನನ್ನ ಸಹೋದ್ಯೋಗಿಯೊಂದಿಗೆ ಸ್ಥಳಕ್ಕೆ ಬಂದು ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.