ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಪೋಸ್ಟರ್ ಗಳ ಮೆರವಣಿಗೆಯನ್ನು ಇಂದು ನಗರದಲ್ಲಿ ನಡೆಸಲಾಯ್ತು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಚಿತ್ರ ಬಿಡುಗಡೆಯಾಗುವ ಶಾಂತಲಾ ಚಿತ್ರ ಮಂದಿರದವರೆಗೂ ಆಟೋ, ಜಟಕಾ ಬಂಡಿ ಮತ್ತು ಅಲಂಕರಿಸಿದ ರಥದಲ್ಲಿ ಪೋಸ್ಟರ್ ಗಳ ಮೆರವಣಿಗೆ ನಡೆಯಿತು. ನೂರಾರು ಅಭಿಮಾನಿಗಳು ಜೈಕಾರ ಹಾಕುತ್ತಾ, ತಮಟೆ ಬೀಟ್ ಗೆ ಹೆಜ್ಜೆ ಹಾಕಿ ಸಿನಿಮಾಗೆ ಶುಭ ಕೋರಿದರು. ಮೆರವಣಿಗೆ ಉದ್ದಕ್ಕೂ ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿದರು.
ಚಂದನವನದ ಬಹುನೀರಿಕ್ಷಿತ ಸಿನಿಮಾ ಒಡೆಯ ಗುರುವಾರ ಬಿಡುಗಡೆಯಾಗಲಿದೆ. ಸಂದೇಶ್ ನಾಗರಾಜ್ ನಿರ್ಮಾಣ, ಎಚ್ಡಿ ಶ್ರೀಧರ್ ನಿರ್ದೇಶನದಲ್ಲಿ ಒಡೆಯ ಚಿತ್ರ ಮೂಡಿ ಬಂದಿದೆ. ದರ್ಶನ್ ಖದರ್ ಅನ್ನು ಮತ್ತಷ್ಟು ಮಿರುಗಿಸುವಂಥಾ ಕಥೆ ಹೊಂದಿರೋ ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ಚಿತ್ರದಲ್ಲಿ ಯಶಸ್ ಮತ್ತು ಪಂಕಜ್ ದರ್ಶನ್ ಸಹೋದರರಾಗಿ ನಟಿಸಿದ್ದಾರೆ. ಸನಾ ತಿಮ್ಮಯ್ಯ ಸಿನಿಮಾದಲ್ಲಿ ದರ್ಶನ್ ಅವರಿಗೆ ಜೊತೆಯಾಗಿದ್ದಾರೆ.