ಗದಗ: ಎನ್ಡಬ್ಲೂಕೆಆರ್ ಟಿಸಿ ಚಾಲಕರು, ನಿರ್ವಾಹಕರುಗಳಿಗೆ ಹಲವು ವಿಷಯಗಳಿಗೆ ಕಿರುಕುಳ ನೀಡುತ್ತಿದ್ದ ಅಧಿಕಾರಿಯನ್ನು ಸಿಬ್ಬಂದಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಬಸ್ ಡಿಪೋದಲ್ಲಿ ನಡೆದಿದೆ.
ರಜೆ, ಹಾಗೂ ಡ್ಯೂಟಿ ಹಾಕುವ ವಿಷಯದಲ್ಲಿ ಅಧಿಕಾರಿಗಳ ಕಿರುಕುಳಕ್ಕೆ ಗದಗ ಎನ್ಡಬ್ಲೂಕೆಆರ್ ಟಿಸಿ ಸಿಬ್ಬಂದಿಗಳು ಬೇಸತ್ತಿದ್ದಾರೆ. ಡಿಪೋ ಮ್ಯಾನೇಜರ್ ಶಶಾಂಕ್ ನಾಯಕ್ ಹಾಗೂ ಎಟಿಎಸ್ ಕಳಸದ ಎಂಬ ಅಧಿಕಾರಿಗಳು ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಜ್ವರವಿದೆ, ಹುಷಾರಿಲ್ಲ ಎಂದು ಹೇಳಿದರೂ ಸಿಬ್ಬಂದಿ ಕೆಲಸಕ್ಕೆ ಬರಲೇಬೇಕು, ಕುಟುಂಬದಲ್ಲಿ ಯಾರೇ ಮೃತಪಟ್ಟರೂ ಮಾರನೆ ದಿನವೇ ಕೆಲಸಕ್ಕೆ ಹಾಜರಿರಬೇಕು. ಅಲ್ಲದೆ ಇನ್ನೂ ಯಾವುದಕ್ಕಾದರೂ ರಜೆ ಬೇಕೆಂದರೆ ರಜೆ ನೀಡದೇ ಅಧಿಕಾರಿಗಳು ಗೋಳಾಡಿಸುತ್ತಾರೆ ಎಂದು ಚಾಲಕ, ನಿರ್ವಾಹಕರು ಆರೋಪಿಸಿದ್ದಾರೆ.
ಹಲವಾರು ವಿಷಯಗಳಿಗೆ ಕಿರುಕುಳ ನೀಡುತ್ತಾರೆ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಬೇಸತ್ತ ಸಿಬ್ಬಂದಿ ಅಧಿಕಾರಿ ಎ.ಟಿ.ಎಸ್ ಕಳಸದ ಅವರಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದುದ್ದು, ಸಿಬ್ಬಂದಿ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ವಿಡಿಯೋ ಸದ್ಯ ಎಲ್ಲೆಡೆ ಫುಲ್ ವೈರಲ್ ಆಗಿದೆ.