– ಕೊರೊನಾ ಹೋರಾಟದಲ್ಲಿ ಹಗಲಿರುಳು ಆಸ್ಪತ್ರೆಯಲ್ಲಿ ಸೇವೆ
ಶಿವಮೊಗ್ಗ: ಕೊರೊನಾ ವೈರಸ್ ನಿರ್ಮೂಲನೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಜೊತೆಗೆ ಕೊರೊನಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಶುಶ್ರೂಷಕಿಯೊಬ್ಬರು ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ.
ಶುಶ್ರೂಷಕಿ ಗೀತಾ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಇವರು ಜಿಲ್ಲೆಯ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಒಂದು ತಿಂಗಳ ವೇತನದ ಜೊತೆಗೆ ಪತಿಯ ಒಂದು ತಿಂಗಳ ಪಿಂಚಣಿ ಹಣವನ್ನು ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗೀತಾ ಅವರ ಪತಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಗೀತಾ ಅವರ ಒಂದು ತಿಂಗಳ ವೇತನ 51 ಸಾವಿರ ಹಾಗೂ ಪತಿಯ ಒಂದು ತಿಂಗಳ ಪಿಂಚಣಿ ಹಣ 13 ಸಾವಿರ. ಒಟ್ಟು 64 ಸಾವಿರ ರೂಪಾಯಿಯ ಚೆಕನ್ನು ಇಂದು ಶಾಸಕ ಅರಗ ಜ್ಞಾನೇಂದ್ರ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರಿಗೆ ನೀಡಿದ್ದಾರೆ. ಈ ಮೂಲಕ ಗೀತಾ ಇತರರಿಗೂ ಮಾದರಿಯಾಗಿದ್ದಾರೆ.
ಕೊರೊನಾ ಕಾಣಿಸಿಕೊಂಡ ದಿನದಿಂದಲೂ ಗೀತಾ ಅವರು ಆಸ್ಪತ್ರೆಯಲ್ಲಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅವರ ಒಂದು ತಿಂಗಳ ಸಂಪೂರ್ಣ ವೇತನ ನೀಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.