ಹುಬ್ಬಳ್ಳಿ: ಗಣೇಶ ಹಬ್ಬ (Ganesha Festival) ಮುಗಿದ ಮೇಲೆ ಹುಬ್ಬಳ್ಳಿಯಲ್ಲಿ (Hubballi) ವಿವಾದ ಕಿಡಿಯೊಂದು ಹೊತ್ತಿಕೊಂಡಿದೆ. ಹಿಂದೂಪರ ಸಂಘಟನೆಗಳ ಜೊತೆ ಸೇರಿ ಹಬ್ಬ ಮಾಡಿದ ಸರ್ಕಾರಿ ನೌಕರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹುಬ್ಬಳ್ಳಿ ಇಎಸ್ಐ ಆಸ್ಪತ್ರೆಯಲ್ಲಿ (ESI Hospital) ಗಣೇಶ ವಿವಾದದ ಹಿಂದೆ ಹಲವಾರು ಅನುಮಾನ ಹುಟ್ಟಿಕೊಳ್ಳುತ್ತಿವೆ. ಆಸ್ಪತ್ರೆ ಅಧೀಕ್ಷಕರ ನಡೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಾರಿ ರಾಜ್ಯದಲ್ಲಿ ವಿವಿಧ ಕಡೆ ಗಣೇಶ ಹಬ್ಬದಲ್ಲಿ ಗಲಾಟೆಯಾಗಿದೆ. ಕೆಲವು ಕಡೆ ವಿವಾದ ಸಹ ಆಗಿದೆ. ಆದರೆ ಹುಬ್ಬಳ್ಳಿ ಧಾರವಾಡದಲ್ಲಿ ಮಾತ್ರ ಅತ್ಯಂತ ಶಾಂತಿಯುತವಾಗಿ ಗಣೇಶ ಹಬ್ಬ ನಡೆದಿದೆ. ಈಗ ಹಬ್ಬ ಮುಗಿದ ಮೇಲೆ ಗಣೇಶ ವಿವಾದ ಕಿಡಿ ಎದ್ದಿದೆ. ಗಣೇಶ ಚತುರ್ಥಿಯಂದು ವಿವಾದ ಮೈಮೇಲೆ ಎಳೆದುಕೊಂಡಿದ್ದ ಹುಬ್ಬಳ್ಳಿ ಇಎಸ್ಐ ಆಸ್ಪತ್ರೆ ಆಡಳಿತ ಮಂಡಳಿ ಈಗ ಮತ್ತೆ ವಿವಾದಾತ್ಮಕ ನಡೆಯಿಂದ ಸುದ್ದಿಯಾಗಿದೆ. ಆಸ್ಪತ್ರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ಬೈರುತ್ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ಕಮಾಂಡರ್ ಹತ್ಯೆ
ಹುಬ್ಬಳ್ಳಿ ಕಾರವಾರ ರಸ್ತೆಯ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿತ್ತು. ಆದರೆ ಈ ಬಾರಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡದ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿದ್ದ ಶಾಶ್ವತ ಮೂರ್ತಿಗೆ ಪೂಜೆ ನಡೆಸಲಾಗುತ್ತಿತ್ತು. ಇದಕ್ಕೆ ಆಸ್ಪತ್ರೆ ಮುಖ್ಯಸ್ಥ ಯೂನಿಸ್ ನಜ್ಮಿ ಕಾರಣ. ಅವರು ಮುಸ್ಲಿಂ ಎನ್ನುವ ಕಾರಣಕ್ಕೆ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿಲ್ಲ ಅಂತ ಆರೋಪ ಸಹ ಕೇಳಿ ಬಂದಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಬಿಜೆಪಿ ಸದಸ್ಯರು ಆಸ್ಪತ್ರೆಗೆ ನುಗ್ಗಿ ತಾವೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಿದ್ದರು. ಅಲ್ಲದೆ ಅಧೀಕ್ಷಕ ನಜ್ಮಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಇದಾದ ಬಳಿಕ ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಆಸ್ಪತ್ರೆ ಅಧೀಕ್ಷಕ ನಜ್ಮಿ ಮತ್ತೊಂದು ವರ್ತನೆ ತೋರಿದ್ದಾರೆ. ಹಿಂದೂಪರ ಸಂಘಟನೆಗಳ ಜೊತೆ ಸೇರಿ ಹಬ್ಬ ಮಾಡಿರುವ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಇದು ಹಿಂದೂಪರ ಸಂಘಟನೆಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಗಲಾಟೆ, ಓರ್ವನ ಕೊಲೆಯಲ್ಲಿ ಅಂತ್ಯ
ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಕೋಮು ಗಲಭೆಯ ಸೃಷ್ಟಿ ಪ್ರಯತ್ನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರದ ಸಿಬ್ಬಂದಿಯಾಗಿ ಹಿಂದೂಪರ ಸಂಘಟನೆಗಳ ಜೊತೆಗೆ ಸೇರಿ ಗಣೇಶ ಮೂರ್ತಿ ಕೂರಿಸಿದ್ದೀರಿ. ನಿಮ್ಮ ಮೇಲೆ ಯಾಕೆ ಕ್ರಮ ಆಗಬಾರದು ಎಂದು ಶುಶ್ರೂಷಾಧಿಕಾರಿ ಜಗದೀಶ್ ಎನ್ನುವವರಿಗೆ ಕಳೆದ 20ರಂದು ನೋಟಿಸ್ ನೀಡಲಾಗಿದೆ. ಏಳು ದಿನ ಉತ್ತರ ನೀಡಲು ಅವಕಾಶ ನೀಡಲಾಗಿದೆ. ಇನ್ನೂ ಈ ವಿಷಯ ಹೊರಗಡೆ ಬಾರದಂತೆ ಎಚ್ಚರಿಕೆ ಸಹ ನೀಡಲಾಗಿದೆಯಂತೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಧೀಕ್ಷಕ ನಜ್ಮಿ ಸಂಪರ್ಕಿಸಿದಾಗ, ಇದು ನಮ್ಮ ಆಡಳಿತಾತ್ಮಕ ವಿಷಯ, ನಮ್ಮ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದೇ ನೋಟಿಸ್ ನೀಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಜ್ ಯಾತ್ರೆಯ ನೆಪದಲ್ಲಿ ಭಿಕ್ಷಕರನ್ನು ಕಳುಹಿಸಬೇಡಿ – ಪಾಕ್ಗೆ ಸೌದಿ ಎಚ್ಚರಿಕೆ
ಒಟ್ಟಿನಲ್ಲಿ ಇಎಸ್ಐ ಆಸ್ಪತ್ರೆ ಅಧೀಕ್ಷಕ ನಜ್ಮಿ ನಡೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಹಬ್ಬದ ಆಚರಣೆ ಮಾಡಿದ ಸಿಬ್ಬಂದಿಗೆ ಧರ್ಮ ಸಂಕಟ ಎದುರಾಗಿದೆ. ಈ ನೋಟಿಸ್ ಮತ್ಯಾವ ರೂಪಪಡೆದುಕೊಳ್ಳಲಿದೆ ಎಂಬುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ತಿರುಮಲನ ಸನ್ನಿಧಿಗೆ 2 ಟ್ರಕ್ಗಳಲ್ಲಿ ಕೆಎಂಎಫ್ ಶುದ್ಧ ನಂದಿನಿ ತುಪ್ಪ ಸರಬರಾಜು