ಬೆಳಗಾವಿ: ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಎಚ್ಡಿ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದರೆ ಇತ್ತ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ಕೆಲ ಶಾಸಕರು ಪಕ್ಷ ತೊರೆದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಅಪರೇಷನ್ ಕಮಲ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಪಕ್ಷ ಬಿಟ್ಟು ಹೋಗಿ ಮತ್ತೆ ಬಂದರು. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಶಾಸಕರು ಯಾರು ಪಕ್ಷದಲ್ಲಿ ಇಲ್ಲ. ಆದರೆ ಒಂದೊಮ್ಮೆ ಪಕ್ಷದ ಇತರೇ ಶಾಸಕರು ಬಿಟ್ಟು ಹೋದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಸಂಚಲನ ಮೂಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಸಹೋದರರಿಂದ ತೊಂದರೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ನಮ್ಮ ಕಾರಣದಿಂದ ಸರ್ಕಾರಕ್ಕೆ ತೊಂದರೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಕಾಂಗ್ರೆಸ್ ಪಕ್ಷ ತೊರೆದು ಕೆಲ ಶಾಸಕರು ಹೋದರೆ ನಾವು ಏನು ಮಾಡಲು ಸಾಧ್ಯವಿಲ್ಲ. ನಾಳೆಯೇ ಸರ್ಕಾರ ಪತನ ಆಗಬಹುದು ನಮಗೇನು ಗೊತ್ತು? ಬೇರೆಯಾದರೂ ಹೋಗಬಹುದು ನಾವು ಪಕ್ಷ ಬಿಟ್ಟು ಹೋಗಲ್ಲ ಎಂದರು.
ಇದೇ ವೇಳೆ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮನೆಗೆ ಕಾಂಗ್ರೆಸ್ ವರಿಷ್ಠರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಉದ್ಭವವಾಗಿರುವ ಸಮಸ್ಯೆಗಳ ಬಗೆಹರಿಸಲು ವರಿಷ್ಠರು ಬಂದಿದ್ದಾರೆ. ಈ ರೀತಿಯ ಸಭೆಗಳು ನಡೆಯವುದು ಸಾಮಾನ್ಯ. ಮೇಲಿಂದ ಮೇಲೆ ಇಂತಹ ಸಭೆ ನಡೆಯುವುದು ರಾಜಕೀಯ ಸಹಜವಾದ ಪ್ರಕ್ರಿಯೆ. ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಸಿಎಂ ಸೇರಿದಂತೆ ಎಷ್ಟೇ ದೊಡ್ಡವರಾದರು ಚರ್ಚೆ ಮಾಡಲೇಬೇಕು. ಇದು ನಮ್ಮ ಪಕ್ಷದ ನಿಯಮವಾಗಿದೆ ಎಂದರು.
ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ ಬ್ರೇಕ್ ಹಾಕಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ಸಿದ್ದರಾಮಯ್ಯ ಅವರು ನನಗೆ ಆಗಲಿ, ರಮೇಶ್ ಅವರಿಗೆ ಆಗಲಿ ಹೇಳುವ ಅವಶ್ಯಕತೆ ಇಲ್ಲ. ಅಂತಹ ಸಮಸ್ಯೆಗಳು ಉದ್ಭವವಾಗಿಲ್ಲ. ಸದ್ಯ ಇದರಲ್ಲಿ ನಮ್ಮ ಪಾತ್ರವೇನು ಇಲ್ಲ. ಪಕ್ಷದ ಕೆಲಸವನಷ್ಟೇ ನಾವು ಮಾಡುತ್ತೇವೆ ಎಂದು ತಿಳಿಸಿದರು.