ಬೆಂಗಳೂರು: ನಗರದ ನಿವಾಸಿಗಳೇ ಸ್ವಲ್ಪ ಇತ್ತ ಗಮನಿಸಿ. ನೀವೇನಾದ್ರೂ ಸಿಲಿಕಾನ್ ಸಿಟಿಯಲ್ಲಿ ಮನೆ ಕಟ್ಟೋದಿಕ್ಕೆ ಪ್ಲಾನ್ ಮಾಡ್ತಾ ಇದ್ದೀರಾ? ಹಾಗಾದ್ರೆ ಇನ್ಮುಂದೆ ಮನೆ ಕಟ್ಟೋಕು ಮುನ್ನಾ ಸಸಿ ನೆಡುವುದು ಕಡ್ಡಾಯವಾಗಿದೆ.
ಹೌದು. ಉದ್ಯಾನ ನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು, ಇದೀಗ ಕಾಂಕ್ರಿಟ್ ಸಿಟಿಯಾಗಿ ಮಾರ್ಪಾಡಾಗ್ತಿದೆ. ಹಸಿರೆಂಬುದೆ ಅಪರೂಪವೆಂಬಂತಾಗಿದೆ. ಹೀಗಾಗಿ ಕೊನೆಗೂ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಬೆಂಗಳೂರನ್ನು ಮತ್ತೆ ಗಾರ್ಡನ್ ಸಿಟಿ ಮಾಡಲು ಹೊರಟಿದೆ.
ಇನ್ಮುಂದೆ ನೀವು ಮನೆ ಕಟ್ಟೋಕು ಮುನ್ನಾ ಎರಡು ಸಸಿಗಳನ್ನು ನೆಡಲೇಬೇಕು. ಅಥವಾ ಎರಡು ಸಸಿಯನ್ನು ನೆಡುವಷ್ಟು ಜಾಗವನ್ನಾದ್ರೂ ಬಿಡಲೇಬೇಕು. ಒಂದು ವೇಳೆ ನೀವು ಈ ರೂಲ್ಸ್ ಬ್ರೇಕ್ ಮಾಡಿದ್ದೇ ಆದಲ್ಲಿ ಅಂಥವರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ತೆಗೆದುಕೊಳ್ಳಲಿದೆ.
ಇದೇನು ಹೊಸ ಕಾಯ್ದೆಯಲ್ಲ. ಗೃಹ ನಿರ್ಮಾಣ ಕಾಯ್ದೆಯಲ್ಲಿ ಮೊದಲಿನಿಂದಲೂ ಈ ನಿಯಮವಿದೆ. ಯಾರೇ ಮನೆ ಕಟ್ಟಿದ್ರು ಮಳೇ ನೀರು ಹರಿದು ಹೋಗುವುದಕ್ಕೆ ಸೂಕ್ತ ವ್ಯವಸ್ಥೆ ಮತ್ತು ಎರಡು ಸಸಿಗಳನ್ನು ನೆಡುವುದು ಕಡ್ಡಾಯ. ಆದ್ರೆ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಈ ನಿಯಮ ಸರಿಯಾದ ರೀತಿಯಲ್ಲಿ ಪಾಲನೆಯಾಗಿರಲಿಲ್ಲ.
ಜನರು ಇದ್ದ ಮರಕ್ಕೂ ಕೊಡಲಿ ಏಟು ಹಾಕುತ್ತಿದ್ದರು. ಇದರಿಂದ ಪರಿಸರ ಪ್ರೇಮಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಕೊನೆಗೂ ನಿದ್ರೆಯಿಂದ ಎಚ್ಚೆತ್ತಿರುವ ಬಿಬಿಎಂಪಿ ಕಟ್ಟುನಿಟ್ಟಾಗಿ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ.
ಬಿಬಿಎಂಪಿ ಹೆಚ್ಚಿನ ನಿಯಮಗಳು ಕಾಗದಕ್ಕೆ ಸೀಮಿತವಾಗಿದ್ದೆ ಹೆಚ್ಚು. ಈ ನಿಯಮವಾದ್ರೂ ಪಾಲನೆಯಾಗಿ ಬೆಂಗಳೂರು ಮತ್ತೆ ಹಸಿರಾಗುತ್ತಾ ಎಂದು ಕಾದು ನೋಡ್ಬೇಕಿದೆ.