ರಾಯಚೂರು: ಮಂದಿರಗಳು ಒಂದೇ ಧರ್ಮ ಹಾಗೂ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಹೀಗಾಗಿ ರಾಮ ಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳು ಕೂಡ ರಾಷ್ಟ್ರ ಮಂದಿರಗಳು ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಮಂದಿರಗಳಿಗೆ ಎಲ್ಲಾ ಧರ್ಮಿಯರು ಪ್ರವೇಶಿಸಬೇಕು. ಮಂದಿರಗಳು ಒಂದೇ ಧರ್ಮ ಹಾಗೂ ಸಮಾಜಕ್ಕೆ ಸೀಮಿತವಾಗಿರುವುದಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ರಾಷ್ಟ್ರದಲ್ಲಿ ಸಾಮರಸ್ಯಕ್ಕೆ ನಾಂದಿಯಾಗಿದೆ. ಮಸೀದಿ ಕಟ್ಟಲು ನೀಡಿರುವ ಜಾಗದ ಬಗ್ಗೆ ಒಂದಿಬ್ಬರು ವಿರೋಧಿಸಿರಬಹುದು. ಆದರೆ ಬಹುತೇಕ ಮಂದಿ ಅಯೋಧ್ಯೆ ತೀರ್ಪನ್ನು ಒಪ್ಪಿದ್ದಾರೆ. ಹೀಗಾಗಿ ಕೇವಲ ರಾಮ ಮಂದಿರವಷ್ಟೇ ಅಲ್ಲ ಎಲ್ಲಾ ಮಂದಿರಗಳೂ ರಾಷ್ಟ್ರ ಮಂದಿರಗಳೆಂದು ಹೇಳಿದರು.
ಕೇಂದ್ರ ಸರ್ಕಾರ ಮೂರು ತಿಂಗಳಳೊಗಾಗಿ ಟ್ರಸ್ಟ್ ಸ್ಥಾಪಿಸಲು ಸೂಚಿಸಿದೆ. ರಾಮಮಂದಿರ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕು. ಸುಪ್ರೀಂ ಕೋರ್ಟ್ ತೀರ್ಪು ಹಿಂದೂ ಮುಸ್ಲಿಂ ಸಾಮರಸ್ಯಕ್ಕೆ ನಾಂದಿ ಎಂದು ಹೇಳಿದರು.
ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ವಿಚಾರವಾಗಿ ಸುಪ್ರೀಂ ಕೋರ್ಟ್ ವಿಸ್ತೃತ ಪೀಠಕ್ಕೆ ಮೇಲ್ಮನವಿ ಅರ್ಜಿ ವರ್ಗಾವಣೆ ಬಗ್ಗೆ ಶ್ರೀಗಳು ಪ್ರತಿಕ್ರಿಯಿಸಿ, ಇದು ಬಹಳ ಸೂಕ್ಷ್ಮವಾದ ವಿಚಾರ, ಒಂದು ಕಡೆ ಸಂಪ್ರದಾಯ ಹಾಗೂ ಮಹಿಳೆಯರ ಹಕ್ಕಿನ ವಿಚಾರ ಇದಾಗಿದೆ. ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ, ಏನೇ ಹೇಳಿದರೂ ಅಸಮಾಧಾನಕ್ಕೆ ಕಾರಣವಾಗುತ್ತದೆ. ತೀರ್ಪಿನ ಬಗ್ಗೆ ಕಾದು ನೋಡೋಣ ಎಂದರು.