ಹಬ್ಬ ಬಂತೆಂದರೆ ಸಾಕು ಮೊದಲು ನೆನಪಾಗುವುದೇ ಸಿಹಿ, ರುಚಿಕರವಾದ ಅಡುಗೆ ಹಾಗೂ ಇನ್ನಿತರ ಖಾದ್ಯಗಳು.
ಯಾವುದೇ ಹಬ್ಬ ಇರಲಿ, ಸಿಹಿಯಾದ ಅಡುಗೆ ಮಾಡುವುದು ಒಂದು ರೀತಿಯ ಸಂಪ್ರದಾಯವೇ ಹೌದು. ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವ ಹಾಗೆ ಹೋಳಿಗೆ, ಪಾಯಸ ಹೀಗೆ ವಿಭಿನ್ನವಾದ ಸಿಹಿ ಪದಾರ್ಥಗಳನ್ನು ಹಬ್ಬದ ಸಂದರ್ಭದಲ್ಲಿ ಮಾಡಲಾಗುತ್ತದೆ.
ದಸರಾ ಹಬ್ಬವನ್ನು ರಾಜ್ಯದಲ್ಲಿ ಬೇರೆ ಬೇರೆ ಕಡೆ ವಿಭಿನ್ನವಾಗಿ ಆಚರಿಸಲಾಗುತ್ತದೆ. ದೇವಿಯ ಪೂಜೆ, 9 ದಿನ ಉಪವಾಸ, ಜಂಬೂಸವಾರಿ, ಹೀಗೆ ವಿಭಿನ್ನ ವಿಚಾರಗಳನ್ನು ಒಳಗೊಂಡು ದಸರಾ ಆಚರಿಸಲಾಗುತ್ತದೆ.
ಕರ್ನಾಟಕದಲ್ಲಿ ಮೈಸೂರು ದಸರಾ, ಮಡಿಕೇರಿ ದಸರಾ, ಮಂಗಳೂರು ದಸರಾ ಹೀಗೆ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಹಾಗೆ ಉತ್ತರ ಕರ್ನಾಟಕದಲ್ಲಿ ದಸರಾ ಆಚರಿಸುವ ರೀತಿ ವಿಭಿನ್ನವಾಗಿದೆ. ನವರಾತ್ರಿಯ ಮೊದಲನೇ ದಿನ ದೇವರ ಮನೆಯಲ್ಲಿ ಘಟಸ್ಥಾಪನೆ ಮಾಡಲಾಗುತ್ತದೆ. ಈ ದಿನವನ್ನು ಘಟಸ್ಥಾಪನೆಯೆಂದೇ ಕರೆಯಲಾಗುತ್ತದೆ. ಈ ಘಟಸ್ಥಾಪನೆ ವೇಳೆ 9 ರೀತಿಯ ದ್ವಿದಳ ಧಾನ್ಯಗಳನ್ನ ಮಣ್ಣಿನಲ್ಲಿ ಹಾಕಿ, ಒಂಬತ್ತು ದಿನಗಳ ಕಾಲ ದೇವರ ಮನೆಯಲ್ಲಿ ಇಡಲಾಗುತ್ತದೆ. ನವರಾತ್ರಿಯ ಕೊನೆಯ ದಿನ ಬನ್ನಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವೇಳೆ ತರಗ (ಸಿಹಿ ಪೂರಿ) ಎಂಬ ಸಿಹಿ ಪದಾರ್ಥವನ್ನು ಮಾಡಲಾಗುತ್ತದೆ. ಈ ತರಗವನ್ನು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಮೈದಾ ಹಿಟ್ಟು
ಸಕ್ಕರೆ ಅಥವಾ ಬೆಲ್ಲ
ಅರಿಶಿಣ ಪುಡಿ
ಮಾಡುವ ವಿಧಾನ:
ಮೈದಾ ಹಿಟ್ಟಿನಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ, ಅದಕ್ಕೆ ಅರಿಶಿನವನ್ನು ಹಾಕಿ ಪೂರಿ ಮಾಡುವ ಹಿಟ್ಟಿನ ಹದಕ್ಕೆ ತರಲಾಗುತ್ತದೆ. ಬಳಿಕ ಇದನ್ನು ದಿನನಿತ್ಯ ಪೂರಿ ತಯಾರಿಸಿದಂತೆ ಮಾಡಲಾಗುತ್ತದೆ.
ಕೊನೆಯ ದಿನ ತರಗವನ್ನು ತಯಾರಿಸಿ, ದೇವರ ಮನೆಯಲ್ಲಿ ಕಟ್ಟಿಗೆಯ ʻಪೂಲಾರಿಗೆʼ ಎಂಬುವುದಕ್ಕೆ ತರಗವನ್ನು ಕಟ್ಟಲಾಗುತ್ತದೆ. ಪೂಲಾರಿಗೆ ಎಂದರೆ 3*3 ಎಂಬಂತೆ 9 ಚೌಕಗಳು ಸಿದ್ಧವಾಗುವಂತೆ ಕಟ್ಟಿಗೆಯಿಂದ ತಯಾರಿಸಲಾಗುತ್ತದೆ. ಅದನ್ನು ದೇವರ ಮನೆಯಲ್ಲಿ ಮೇಲೆ ಕಟ್ಟಲಾಗುತ್ತದೆ. ಅದಕ್ಕೆ ತಯಾರಿಸಿರುವ ತರಗವನ್ನು ದಾರದ ಸಹಾಯದಿಂದ ಕಟ್ಟಲಾಗುತ್ತದೆ. ಅದರ ಜೊತೆಗೆ ತೋರಣವನ್ನು ಕಟ್ಟಲಾಗುತ್ತದೆ. ಈ ತರಗವನ್ನು ಬನ್ನಿ ಕೊಟ್ಟು ಬಳಿಕ ದೇವರ ಮನೆಯಲ್ಲಿ ಕಟ್ಟಲಾದ ಪೂಲಾರಿಗೆಯಿಂದ ಕಿತ್ತು ತೆಗೆದುಕೊಳ್ಳಲಾಗುತ್ತದೆ. ದೇವರಿಗೆ ಬನ್ನಿ ಅರ್ಪಿಸಿ ಇದನ್ನೂ ತಿನ್ನುವ ಸಂಪ್ರದಾಯವಿದೆ.