ಬೆಂಗಳೂರು: ಯಾರಿಗೂ ಬೇಡದ ಹುದ್ದೆಯನ್ನು ನಾಯಕರ ತಲೆಗೆ ಕಟ್ಟಲು ಕಾಂಗ್ರೆಸ್ ಹೈಕಮಾಂಡ್ ಮುಂದಾದಂತಿದೆ. ಬೇಡ ಬೇಡ ಅಂದರೂ ಹುದ್ದೆ ಸೃಷ್ಟಿಸಿ ಹೈಕಮಾಂಡ್ ಹೇಗಾದರೂ ಮಾಡಿ ರಾಜ್ಯ ಕಾಂಗ್ರೆಸ್ ನಾಯಕರನ್ನು ಸಮಾಧಾನ ಪಡಿಸಲು ಮುಂದಾಗಿದೆ.
ಕೆಪಿಸಿಸಿ, ವಿಪಕ್ಷ ಹಾಗೂ ಸಿಎಲ್ಪಿ ನಾಯಕನ ಸ್ಥಾನದ ಆಯ್ಕೆಗೆ ಕಾಂಗ್ರೆಸ್ ಹೈ ಕಮಾಂಡ್ ಕಸರತ್ತು ನಡೆಸುತ್ತಿದೆ. ಆದರೆ ಆಕಾಂಕ್ಷಿಗಳು ಹೆಚ್ಚಿರುವ ಕಾರಣ ಎಲ್ಲರನ್ನು ಸಮಾಧಾನ ಪಡಿಸಲು ಕೈ ಹೈಕಮಾಂಡ್ ಕೂಡ ಹರ ಸಾಹಸ ಪಡುತ್ತಿದೆ. ಇದಕ್ಕಾಗಿ ಈಗ ಹೊಸ ಹುದ್ದೆಯೊಂದರ ಸೃಷ್ಟಿಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಅದೇ ಪ್ರಚಾರ ಸಮಿತಿ ಅಧ್ಯಕ್ಷನ ಹುದ್ದೆ.
ಕೆಪಿಸಿಸಿ ಅಧ್ಯಕ್ಷ, ಸಿಎಲ್ಪಿ ನಾಯಕ, ವಿಪಕ್ಷ ನಾಯಕ ಹೀಗೆ ನಿರೀಕ್ಷೆಯ ಹುದ್ದೆ ವಂಚಿತವಾದ ನಾಯಕನಿಗೆ ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನ ಕೊಟ್ಡು ಸಮಾಧಾನ ಪಡಿಸಲು ಕೈ ಹೈಕಮಾಂಡ್ ಮುಂದಾಗಿದೆ. ಆದರೆ ಇನ್ನು ಮೂರು ವರ್ಷಗಳ ಕಾಲ ಯಾವುದೇ ಪ್ರಮುಖ ಚುನಾವಣೆ ಇಲ್ಲದ ಕಾರಣ ಪ್ರಚಾರ ಸಮಿತಿ ಅಧ್ಯಕ್ಷನಾದರೂ ಯಾವುದೆ ಪ್ರಯೋಜನ ಇಲ್ಲ ಎನ್ನುವುದು ಕೈ ನಾಯಕರ ಅಭಿಪ್ರಾಯ.
ಆದ್ದರಿಂದ ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನ ನೀಡುತ್ತೇವೆ ಎಂದರೂ ಅದನ್ನ ಪಡೆಯಲು ಯಾರು ಸಿದ್ದರಿಲ್ಲ. ಹೈಕಮಾಂಡ್ ಲೆಕ್ಕಾಚಾರ ಕಂಡು ಕೈ ನಾಯಕರೇ ಬೆಚ್ಚಿ ಬಿದ್ದಿದ್ದಾರೆ. ಯಾವುದೇ ಸ್ಥಾನಮಾನ ಸಿಗದಿದ್ದರೂ ಪರವಾಗಿಲ್ಲ, ಆದರೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಮಾತ್ರ ಬೇಡ ಎಂದು ಕೈ ನಾಯಕರು ಒಳಗೊಳಗೆ ಆತಂಕಕ್ಕೆ ಒಳಗಾಗಿದ್ದಾರೆ.