ಲಕ್ನೋ: ಪ್ರೇಮಿಗಳಿಬ್ಬರ ಪ್ರೇಮ ಸಂಬಂಧವನ್ನು ಒಪ್ಪದ ಹುಡುಗಿಯ ಸಂಬಂಧಿಕರು ಯುವಕನೊಬ್ಬನನ್ನು ಕ್ರೂರವಾಗಿ ಥಳಿಸಿ, ವಿಷ ಕುಡಿಸಿದ ಘಟನೆ ಗ್ರೇಟರ್ ನೋಯ್ಡಾದ ಕೊತ್ವಾಲಿಯ ದಾದ್ರಿ ಪ್ರದೇಶದಲ್ಲಿ ನಡೆದಿದೆ.
ಅನಂಗ್ಪುರ ಗ್ರಾಮದ ನಿವಾಸಿ ವಿಶಾಲ್ ಪಾಂಡೆ ಹಲ್ಲೆಗೊಳಗಾಗಿದ್ದ ವ್ಯಕ್ತಿ. ಯುವಕನನ್ನು ಮಾರಣಾಂತಿಕ ಹಲ್ಲೆ ನಡೆಸಿ ಆತ ಮೃತಪಟ್ಟಿರಬಹುದು ಎಂದು ಭಾವಿಸಿ ಆತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವಕನನ್ನು ಕಂಡ ದಾರಿಹೋಕರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಗಾಯಾಳುವನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ. ಸಾವಿಗೂ ಮುನ್ನ ಯುವಕ ವೀಡಿಯೋ ರೆಕಾರ್ಡ್ ಮಾಡಿ ಕುಟುಂಬ ಸದಸ್ಯರಿಗೆ ಕಳುಹಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸ್ಟೇರಿಂಗ್ ಕಟ್ ಆಗಿ ಕೆರೆಗೆ ಉರುಳಿದ ಗೂಡ್ಸ್ ವಾಹನ
ಗ್ರೇಟರ್ ನೋಯ್ಡಾದ ಹೆಚ್ಚುವರಿ ಡಿಸಿಪಿ ಪ್ರಕಾರ, ಮೃತನನ್ನು ಮೊದಲಿಗೆ ಮಹಿಳೆಯ ಮನೆಯವರು ಸಂಚು ರೂಪಿಸಿ ಯುವತಿಗೆ ಆತನನ್ನು ದಂಕೌರ್ನ ಚಿಟಿ ಗ್ರಾಮದ ಕಾಲುವೆ ಬಳಿ ಕರೆಸುವಂತೆ ಒತ್ತಡ ಹೇರಿದ್ದಾರೆ. ನಂತರ ಕುಟುಂಬವು ಯುವಕನನ್ನು ಬರ್ಬರವಾಗಿ ಥಳಿಸಿ ವಿಷವನ್ನು ಕುಡಿಸಿ ಹಲ್ಲೆಗೈದಿದ್ದಾರೆ. ಈ ವೇಳೆ ಆತ ಸತ್ತಿದ್ದಾನೆ ಎಂದು ಭಾವಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪಗೆ ಕೊಟ್ಟು ಗೊತ್ತೇ ಹೊರತು ಬೇಡಿ ಪಡೆದು ಗೊತ್ತಿಲ್ಲ: ಬಿ.ವೈ.ವಿಜಯೇಂದ್ರ
ಮೃತನ ತಂದೆ ನೀಡಿದ ದೂರಿನ ಮೇರೆಗೆ ದಾದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.