ಬೆಂಗಳೂರು: ಸದಸ್ಯತ್ವ ಅಭಿಯಾನಕ್ಕೆ ಬಂದಿದ್ದೇವೆ ವಿನಾ: ಕಾಂಗ್ರೆಸ್ ಶಾಸಕರ ಮನವೊಲಿಕೆಗಲ್ಲ. ಯಾವ ಅತೃಪ್ತ ಶಾಸಕರು ಕೂಡ ನನ್ನ ಜೊತೆ ಇಲ್ಲ. ಎಲ್ಲರೂ ದೇವರ ಲಿಂಕ್ ನಲ್ಲಿ ಇದ್ದಾರೆ ಎಂದು ಬಿಜೆಪಿ ಶಾಸಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ನನ್ನ ಕ್ಷೇತ್ರ, ನಾನು ಇಲ್ಲಿನ ಶಾಸಕ. ಯಾವಾಗಲೂ ನಾನು ಇಲ್ಲಿಗೆ ಬರುತ್ತಿರುತ್ತೇನೆ. ಇಲ್ಲಿ ಸದಸ್ಯತ್ವ ಅಭಿಯಾನಕ್ಕೆ ಬಂದಿದ್ದೇವೆ. ನಾನು ಯಾವ ಕಾಂಗ್ರೆಸ್ ಪಕ್ಷದ ಶಾಸಕರ ರಕ್ಷಣೆಗೂ ಬಂದಿಲ್ಲ. ನಾನು ಮುಂಬೈ ತೆರಳಿದ್ದು ನಿಜ. ಅಲ್ಲಿ ಇದ್ದ ಪಕ್ಷೇತರ ಶಾಸಕರ ಬಳಿ ನಮ್ಮನ್ನು ಬೆಂಬಲಿಸಿ ಎಂದು ಕೇಳಲು ಹೋಗಿದ್ದೆ. ಈ ವೇಳೆ ಯಾವ ಕಾಂಗ್ರೆಸ್ ಶಾಸಕರನ್ನು ನಾನು ಭೇಟಿ ಮಾಡಿಲ್ಲ. ರಾಜೀನಾಮೆ ಪರ್ವಕ್ಕೂ ನಮಗೂ ಏನೂ ಸಂಬಂಧವಿಲ್ಲ ಎಂದು ಹೇಳಿದರು.
ನಾನು ಕಾಂಗ್ರೆಸ್ಸಿನ ಆರು ಜನರನ್ನು ಸಂಪರ್ಕಿಸಿಲ್ಲ, 8 ಜನರನ್ನೂ ಸಂಪರ್ಕ ಮಾಡಿಲ್ಲ. ಅದರಲ್ಲೂ ರಾಜೀನಾಮೆ ನೀಡಿರುವ ಬೆಂಗಳೂರಿನ ಶಾಸಕರನ್ನಂತೂ ನಾನು ಮಾತನಾಡಿಸಿಲ್ಲ. ಅವರಿಗೂ ನನಗೂ ಪರಿಚಯವೇ ಇಲ್ಲ. ಅವರನ್ನು ನಾನು ನೋಡೇ ಎಲ್ಲ ಎಂದರು.
ಸಚಿವ ಡಿ.ಕೆ ಶಿವಕುಮಾರ್ ಅವರು ಮೊದಲೇ ಶಾಸಕರ ಸಮಸ್ಯೆ ಬಗೆಹರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮೈತ್ರಿಯಲ್ಲಿ ಸಿಎಂ ಹಾಗೂ ಇತರೇ ನಾಯಕರು ಶಾಸಕರ ಸಮಸ್ಯೆ ಕೇಳಿ ಪರಿಹಾರ ನೀಡಿದ್ದರೆ ಯಾರು ಕೂಡ ರಾಜೀನಾಮೆ ನೀಡುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿಯ ವಿ. ಸೋಮಣ್ಣ, ಸತೀಶ್ ರೆಡ್ಡಿ ಹಾಗೂ ಇತರೆ ಬಿಜೆಪಿ ಕಾರ್ಪೋರೇಟರ್ ಗಳು ಕೂಡ ಆರ್. ಅಶೋಕ್ ಅವರಿಗೆ ಸಾಥ್ ನೀಡಿದರು.