ಚಿಕ್ಕಮಗಳೂರು: ಸೂಕ್ತ ರಸ್ತೆ ಇಲ್ಲದೆ ವಯೋವೃದ್ಧೆಯನ್ನ ಜೋಳಿಗೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸುವ ಪರಿಸ್ಥಿತಿ ಜಿಲ್ಲೆಯಲ್ಲಿ ಇಂದಿಗೂ ಜೀವಂತವಾಗಿದೆ. ಜಿಲ್ಲೆಯ ಕಳಸ ತಾಲೂಕಿನ ಕಳಕೋಡು ಗ್ರಾಮದಲ್ಲಿ ವೃದ್ಧೆಯನ್ನ ಜೋಳಿಗೆಯಲ್ಲಿ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಳಸ ಸಮೀಪದ ಕಳಕೋಡು ಗ್ರಾಮದಿಂದ ಈಚಲುಹೊಳೆ ಗ್ರಾಮದವರೆಗೂ ವೃದ್ಧೆಯನ್ನ ಜೋಳಿಗೆಯಲ್ಲಿ ಹೊತ್ತು ತಂದು ಅಲ್ಲಿಂದ ಆಟೋದಲ್ಲಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಉದ್ದವಾದ ಮರದ ಕೊಂಬೆಗೆ ಬೆಡ್ಶೀಟ್ ಕಟ್ಟಿಕೊಂಡು ವೃದ್ಧೆಯನ್ನು ಮಲಗಿಸಿಕೊಂಡು ಹೊತ್ತು ಬಂದಿದ್ದಾರೆ. ಇದನ್ನೂ ಓದಿ: ಗೊಬ್ಬರಕ್ಕೆ 28,6555 ಕೋಟಿ ಸಬ್ಸಿಡಿ
ಕಳಕೋಡು ಗ್ರಾಮದ 70 ವರ್ಷದ ವೃದ್ಧೆ ಲಕ್ಷ್ಮಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನ ಆಸ್ಪತ್ರೆಗೆ ದಾಖಲಿಸಲು ಸೂಕ್ತ ರಸ್ತೆ ಇಲ್ಲದ ಕಾರಣ ಜೋಳಿಗೆಯಲ್ಲಿ ಹೊತ್ತು ತಂದಿದ್ದಾರೆ. ಕಳಕೋಡು ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಗಳಿವೆ. ಆದರೆ ಓಡಾಡಲು ಸೂಕ್ತ ರಸ್ತೆ ಇಲ್ಲ. ಕಾಡುದಾರಿಯೇ ಇವರಿಗೆ ಜೀವಾಳ. ಹುಟ್ಟು-ಸಾವು ಸೇರಿದಂತೆ ಮನೆಗೆ ದಿನಸಿ ಸಾಮಾನುಗಳನ್ನ ತರಲು ಕಾಡಿನ ಕಾಲು ದಾರಿಯನ್ನೇ ನಂಬಿಕೊಂಡಿದ್ದಾರೆ. ರಸ್ತೆ ಇಲ್ಲದ ಕಾರಣ ಸುಮಾರು ನಾಲ್ಕು ಕಿ.ಮೀ. ವೃದ್ಧೆಯನ್ನ ಜೋಳಿಗೆಯಲ್ಲೇ ಸಾಗಿಸಿದ್ದಾರೆ. ಈಗಾಗಲೇ ಸ್ಥಳೀಯರು ಹಲವು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಜಿಲ್ಲಾಧಿಕಾರಿ, ಶಾಸಕರು, ಸಂಸದರಿಗೆ ಮನವಿ ಮಾಡಿದ್ದಾರೆ. ಆದರೆ ಈವರೆಗೂ ಯಾರೂ ಕೂಡ ಸ್ಪಂದಿಸಿಲ್ಲ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 25 ಸಾವಿರ ಬಿಸ್ಕೆಟ್, ಬೇಕರಿ ತಿಂಡಿಯಿಂದ ತೆಯ್ಯಂ ಕಲಾಕೃತಿ-ಕೇರಳ ಕಲಾಕಾರನ ಕೈಚಳಕ
ಮೂಡಿಗೆರೆ ಹಾಗೂ ಕಳಸ ತಾಲೂಕಿನಲ್ಲಿ ರಸ್ತೆ ಸಂಪರ್ಕವಿಲ್ಲದ ಹತ್ತಾರು ಗ್ರಾಮಗಳಿವೆ. ಸ್ಥಳೀಯರು ಸೇತುವೆ ನಿರ್ಮಿಸಿ ಕೊಡುವಂತೆ ಶಾಸಕರಿಗೆ ಮನವಿ ಮಾಡುತ್ತಲೇ ಬಂದಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ನೊಂದವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ತಾವೇ ಕಾಲು ಸಂಕ ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ