ಬೆಂಗಳೂರು: ಹಿಜಬ್ನಿಂದ ಪರೀಕ್ಷೆ ಬರೆಯದೇ ಹೋದ್ರೆ ಅವರಿಗೆ ಮತ್ತೆ ಅವಕಾಶ ಕೊಡುವುದಿಲ್ಲ. ನಾವು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ಗೆ ಹೋಗುವವರಿಗೆ ಇದೆಲ್ಲವೂ ಗೊತ್ತಾಗುವುದಿಲ್ಲವೇ? ಪರೀಕ್ಷೆಗೆ ಗೈರಾದರೆ ಅಲ್ಲಿಗೆ ಮುಗೀತು. ಮತ್ತೆ ಯಾರಿಗೂ ವಿಶೇಷ ಅವಕಾಶ ಕೊಡುವುದಿಲ್ಲ. ಅವರು ಪೂರಕ ಪರೀಕ್ಷೆಯಲ್ಲೇ ಬರೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.
ಮದರಸ ಬಯಸಿದ್ರೆ ಔಪಚಾರಿಕ ಶಿಕ್ಷಣ: ಇದೇ ವೇಳೆ ಮದರಸಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮದರಸಗಳಲ್ಲಿ ವೃತ್ತಿಪರ ಶಿಕ್ಷಣ ಸಿಗುತ್ತಿಲ್ಲ. ಹಾಗೆಂದು ಮದರಸ ಶಿಕ್ಷಣ ಇಲಾಖೆಯಿಂದ ನಡೆಸಲಾಗುವುದಿಲ್ಲ. ಮದರಸಗಳೇನಾದರೂ ನಮ್ಮನ್ನು ಕೇಳಿದರೆ ನಾವು ಔಪಚಾರಿಕ ಶಿಕ್ಷಣ ಕೊಡಲು ಸಿದ್ದ. ಏಕೆಂದರೆ ಏಕರೂಪದ ಶಿಕ್ಷಣ ನೀಡುವ ಆಸೆ ನಮಗೂ ಇದೆ. ಸದ್ಯಕ್ಕೆ ಸರ್ಕಾರದ ಮಟ್ಟದಲ್ಲಿ ಇನ್ನು ಚರ್ಚೆ ಆಗಿಲ್ಲ. ಚರ್ಚೆ ಬಳಿಕ ಅಂತಮ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಹೆಬ್ಬಾಳದಲ್ಲಿ ಸರಣಿ ಅಪಘಾತ – ಬಿಬಿಎಂಪಿ ಕಸದ ಲಾರಿಗೆ ಬಾಲಕಿ ಬಲಿ
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್, ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲನೆ ನೀಡಲಾಗಿದೆ. ಮತ್ತೆ ಟಿಇಟಿ ಮಾಡಲು ಸಾಧ್ಯವಿಲ್ಲ. ಈಗ 15 ಸಾವಿರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ನಿಗದಿಯಂತೆ ನೇಮಕಾತಿ ನಡೆಯುತ್ತದೆ. ಮುಂದಿನ ಬಾರಿಯಿಂದ ವರ್ಷಕ್ಕೆ ಎರಡು ಟಿಇಟಿ, ಒಂದು ಸಿಇಟಿ ಮಾಡುತ್ತೇವೆಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸ್ಕೂಲ್ ಬಳಿ ಬಂದು ಸಮಸ್ಯೆ ಕ್ಲೀಯರ್ ಮಾಡಿ- ಠಾಣೆ ಮೆಟ್ಟಿಲೇರಿದ ಪುಟಾಣಿ