ಮೈಸೂರು: ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ. ಇದು ಮೈಸೂರಿನ ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನನ ಸ್ಥಿತಿ. ದಸರೆಯಲ್ಲಿ ಬೆಣ್ಣೆ, ಕಾಳುಗಳ ಮೃಷ್ಠಾನ್ನಾ ಭೋಜನ ಅರ್ಜುನನಿಗೆ ಸಿಗುತ್ತೆ. ಆದರೆ ವಾಪಾಸ್ ಸ್ವಸ್ಥಾನಕ್ಕೆ ಮರಳಿದಾಗ ಮೇವು, ನೀರಿಲ್ಲದೆ ಆನೆ ದಿನದೂಡ ಬೇಕಾದ ಸ್ಥಿತಿ ಇದೆ.
ದಸರಾದಲ್ಲಿ ಚಿನ್ನದ ಅಂಬಾರಿ ಹೊರಲು ಅರ್ಜುನ ಬೇಕು. ಪುಂಡಾನೆಗಳ ಉಪಟಳ ನಿಯಂತ್ರಿಸಲು ಅರ್ಜುನ ಬೇಕು. ಹುಲಿ, ಚಿರತೆ ಹಿಡಿಯಲು ಅರ್ಜುನ ಬೇಕು. ಆದರೆ ಇಂತಹ ಅರ್ಜುನನ ಯೋಗಕ್ಷೇಮ ಮಾತ್ರ ಯಾರಿಗೂ ಬೇಡವಾಗಿದೆ. ಮೇವಿಗಾಗಿ ನೀರಿಗಾಗಿ ಗಜಪಡೆಯ ನಾಯಕ ಅರ್ಜುನ ಕಾಡಿನಲ್ಲಿ ಕಿ.ಮೀ ಗಟ್ಟಲೇ ಸುತ್ತಾಟ ನಡೆಸಬೇಕಾಗಿದೆ. ಈ ವೇಳೆ ಕಾಡಾನೆಗಳ ದಾಳಿಗೆ ಅರ್ಜುನ ಒಳಗಾಗಿದ್ದಾನೆ.
ಅಲ್ಲದೆ ಎರಡ್ಮೂರು ಬಾರಿ ಆಹಾರ ಅರಸಿ ಕಾಡಿನೊಳಗೆ ಹೋಗಿ ಅಲ್ಲಿ ತಪ್ಪಿಸಿಕೊಂಡಿದ್ದಾನೆ. ಮೈಸೂರಿನ ಹುಣಸೂರಿನ ನಾಗರಹೊಳೆಯ ಬಳ್ಳೆ ಅರಣ್ಯದಲ್ಲಿ ಇರುವ ಅರ್ಜುನನ್ನು ಕೇಳುವವರೆ ಇಲ್ಲ. ನಾಗರಹೊಳೆಯಲ್ಲಿ ಮೇಲ್ಛಾವಣಿ ಇಲ್ಲದ ಶೆಡ್ ನಲ್ಲಿ ಅರ್ಜುನ ಇರಬೇಕು. ಅರ್ಜುನನ ಮಾವುತ ವಿನಿಗು ಮನೆ ಇಲ್ಲ. ಆತ ಗುಡಿಸಲಲ್ಲೆ ಇದ್ದಾನೆ.
ಸರ್ಕಾರದಿಂದ ದಸರಾ ಆನೆಗಳಿಗಾಗಿ ವಿಶೇಷ ಪ್ಯಾಕೇಜ್ ಇದೆ. ಆದರೆ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ನಿಗೂಢ. ಟೆಂಡರ್ ಮೂಲಕ ವರ್ಷಕ್ಕೊಮ್ಮೆ ಆನೆಗಳ ಆಹಾರ ನೀರಿನ ವ್ಯವಸ್ಥೆಗೆ ಬೆಲ್ಲ, ಭತ್ತ, ಒಣಹುಲ್ಲು, ತೆಂಗಿನಕಾಯಿ, ಅಕ್ಕಿ, ಉಪ್ಪು ನೀಡಿಕೆಗಾಗಿ ಹಣ ಬಿಡುಗಡೆ ಮಾಡಲಾಗ್ತಿದೆ. ಆದರೆ ಕ್ಯಾಂಪ್ನಲ್ಲಿರುವ ಆನೆಗಳಿಗೆ ಈ ಆಹಾರ ಪದಾರ್ಥ ತಲುಪುತ್ತಿಲ್ಲ.