ಬೆಂಗಳೂರು: ನಮ್ಮ ತಂದೆಯಿಂದ ಬಂದಿರೋ ಬಳುವಳಿ ಒಂದೇ ಬಣ್ಣ ಹಚ್ಚೋದು, ಆಕ್ಟಿಂಗ್ ಮಾಡೋದು ಅಷ್ಟೇ. ನಮಗೆ ರಾಜಕೀಯ ಬೇಡ ಎಂದು ನಟ ಶಿವರಾಜ್ ಕುಮಾರ್ (Shicaraj Kumar) ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಗೆ ರೆಡಿಯಾಗಿ ಅಂತಾ ಡಿಕೆಶಿ (DK Shivakumar) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್ ಹಾಕೋದು ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ ಎಂದರು.
ಬಂಗಾರಪ್ಪ ಮಗಳು ನಮ್ಮ ಮನೆ ಸೊಸೆ. ಗೀತಾಳಿಗೆ ಇಂಟರೆಸ್ಟ್ ಇದ್ರೆ ಮಾಡ್ಲಿ. ಹೆಂಡತಿ ಇಷ್ಟಪಟ್ಟರೆ ಅವರಿಗೆ ಸಪೋರ್ಟ್ ಮಾಡೋದು ಗಂಡನ ಕೆಲಸ. ಗೀತಾ ಇಷ್ಟಪಟ್ರೆ ಚುನಾವಣೆಗೆ ಸಪೋರ್ಟ್ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ಶಿವಣ್ಣಗೆ ಎಂಪಿ ಟಿಕೆಟ್ ಆಫರ್ ಕೊಟ್ಟ ಡಿಕೆಶಿ
75 ನೇ ವರ್ಷದ ಈಡಿಗ ಸಮುದಾಯದ ಈ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಇರಬೇಕಿತ್ತು. ಆದರೆ ಇಲ್ಲ, ಆದರೆ ಅವರ ಆಶೀರ್ವಾದವಿದೆ. ನಮ್ಮ ಬೇಡಿಕೆಗಳನ್ನು ಸಿದ್ದರಾಮಯ್ಯ ಸರ್ಕಾರ ಈಡೇರಿಸುತ್ತದೆ. ನಮ್ಮ ತಂದೆಯವರು ಯಾವಾಗಲೂ ಸಿದ್ದರಾಮಯ್ಯ ಅವರಿಗೆ ನಮ್ಮ ಕಾಲದವರು ಅಂತಿದ್ದರು. ಅಂತಹ ಬಾಂಧವ್ಯ ಮುಖ್ಯಮಂತ್ರಿಗಳಲ್ಲಿ ಇದೆ ಎಂದು ಹೇಳಿದರು.
ಒಬ್ಬೊಬ್ಬರಿಗೆ ಒಂದೊಂದು ಭಿನ್ನಾಭಿಪ್ರಾಯ ಇರುತ್ತದೆ. ಇಂತಹ ಕಾರ್ಯಕ್ರಮದಿಂದ ಪ್ರೋತ್ಸಾಹ ಮುಖ್ಯ. ಯಾರು ಮಾಡಿದ್ರು ಅನ್ನೋದು ಮುಖ್ಯವಲ್ಲ. ಯಾರಿಗೋಸ್ಕರ ಮಾಡಿದ್ರು ಅನ್ನೋದು ಮುಖ್ಯ. ಭರವಸೆ ಮಾತು ಮುಖ್ಯಮಂತ್ರಿಗಳಿಂದ ಬರಬೇಕು. ಇಂತಹ ಕಾರ್ಯಕ್ರಮಗಳು ಬರಬೇಕು ಎಂದು ಶಿವಣ್ಣ ತಿಳಿಸಿದರು.