ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಕೊಲ್ಲೂರು ಮೂಕಾಂಬಿಕಾ (Kollur Mukambika)ದೇವಸ್ಥಾನದಲ್ಲಿ ಭೇಟಿ ಮಾಡಿದ್ದರು. ಈ ಭೇಟಿಗೆ ಹಲವಾರು ಅರ್ಥಗಳನ್ನು ಕಲ್ಪಿಸಲಾಗಿತ್ತು. ಕಿಚ್ಚ ಸುದೀಪ್ ಬಿಜೆಪಿ (BJP) ಅಭ್ಯರ್ಥಿಗಳನ್ನು ಬೆಂಬಲಿಸಿದ್ದರಿಂದ ರಿಷಬ್ ಕೂಡ ಅದೇ ಹಾದಿಯಲ್ಲೇ ಸಾಗಲಿದ್ದಾರೆ ಎನ್ನುವ ಸುದ್ದಿಯಿತ್ತು. ಅದಕ್ಕೆ ರಿಷಬ್ ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ‘ಕೊಲ್ಲೂರು ಮುಕಾಂಬಿಕೆ ದರ್ಶನಕ್ಕೆ ಹೋದಾಗ ಮಾನ್ಯ ಮುಖ್ಯಮಂತ್ರಿಗಳ ಭೇಟಿ ಆಯಿತು. ರಾಜಕೀಯದ ಬಣ್ಣ ಬೇಡ. ಕಾಂತಾರದ ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ’ ಎಂದು ಬರೆದಿದ್ದಾರೆ. ಇದನ್ನೂ ಓದಿ:ಕನ್ನಡದ ನಟಿ ವಿಶಾಖ ಸಿಂಗ್ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು
ಸಿಎಂ ಬೊಮ್ಮಾಯಿ ಹೇಳಿದ್ದೇನು?
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ‘ರಿಷಬ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಿಕ್ಕಿದ್ದು ಆಕಸ್ಮಿಕ. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ದೇವಸ್ಥಾನದಲ್ಲಿ ಇದ್ದರು. ಹಾಗಾಗಿ ನಾವು ಜೊತೆಗೆ ಹೋಗಿ ದೇವರಿಗೆ ಪೂಜೆಯನ್ನು ಸಲ್ಲಿಸಿದ್ದೇವೆ. ಇದು ಯಾವುದು ಪೂರ್ವ ನಿರ್ಧರಿತ ಆಗಿರಲಿಲ್ಲ’ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಸಿಎಂ, ‘ನಮ್ಮ ಸಿದ್ದಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಈ ಹಿಂದೆ ಕೂಡ ರಿಷಬ್ ನಮ್ಮ ಸಿದ್ದಾಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ರಿಷಬ್ ಶೆಟ್ಟಿಯ ವಿಚಾರಗಳು ಹಾಗೆ ಇದೆ. ಅದನ್ನು ಆಗಾಗ ಅವರು ಪ್ರಕಟಣೆ ಮಾಡಿದ್ದಾರೆ. ಅವರು ಕೊಲ್ಲೂರು ದೇಗುಲದ ಒಳಗೆ ಇದ್ದದ್ದು ನನಗೆ ಆಶ್ಚರ್ಯ ಆಯ್ತು. ಬಿಜೆಪಿ, ನಾಯಕತ್ವದ ಬಗ್ಗೆ ಅವರು ಒಲವಿರುವ ಮಾತುಗಳಾಡಿದವರು. ಪ್ರಚಾರಕ್ಕೆ ಬರುವ ಕುರಿತು ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನೆಂದು ಆಶೀರ್ವಾದ ಕೊಡುತ್ತಾಳೆ ನೋಡೋಣ’ ಎಂದರು.